ಬೆಂಗಳೂರು : ರಾಜ್ಯದಲ್ಲಿ ಕೇಂದ್ರ ಹಾಗೂ ಸರ್ಕಾರದ ವಾಹನಗಳಿಗೆ ಮಾತ್ರ ಕರ್ನಾಟಕ ಸರ್ಕಾರದ ಹೆಸರು, ಲಾಂಛನ ಹಾಗೂ ಚಿಹ್ನೆ ಬಳಸಲು ಅವಕಾಶವಿದೆ. ಆದರೆ ಬೆಂಗಳೂರಲ್ಲಿ ಸರ್ಕಾರದ ಅಧೀನದ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ತಮ್ಮ ವಾಹನಗಳ ಮೇಲೆ ಅನಧಿಕೃತವಾಗಿ ಸರ್ಕಾರದ ಲಾಂಛನ, ಚಿಹ್ನೆಗಳನ್ನು ಅಳವಡಿಸಿರುವುದು ಕಂಡುಬರುತ್ತಿದೆ. ಈಗಾಗಲೇ ಸಾರಿಗೆ ಇಲಾಖೆಯಲ್ಲಿ ಈ ಬಗ್ಗೆ ನೂರಾರು ಪ್ರಕರಣಗಳು ದಾಖಲಾಗಿವೆ. ಇಂತಹ ನೋಂದಣಿ ಫಲಕಗಳನ್ನು ತೆರವುಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಏಳು ವಿಶೇಷ ತನಿಖಾ ತಂಡಗಳನ್ನು ರಚಿಸಿ, ಜೂನ್ ಒಂದರಿಂದ ಕಾರ್ಯಾಚರಣೆಗೊಳಿಸಲು ಪ್ಲಾನ್ ಮಾಡಿದೆ. ಮೊದಲಿಗೆ 500, ಎರಡನೇ ಬಾರಿ ಒಂದು ಸಾವಿರ ರೂಪಾಯಿ ಅದಾದ ನಂತರ ವಾಹನವನ್ನು ಸೀಜ್ ಮಾಡಲಾಗುತ್ತದೆ.

ಸಾರಿಗೆ ಇಲಾಖೆಯ ನಿಯಮದಂತೆ, ಕೇವಲ ಸರ್ಕಾರಿ ವಾಹನಗಳಿಗೆ ಅಂದರೇ ಜಿ ಸಿರೀಸ್ ಇರೋ ನಂಬರ್ ಪ್ಲೇಟ್ ಇರೋ ವಾಹನಗಳಲ್ಲಿ ಮಾತ್ರ ಕರ್ನಾಟಕ ಸರ್ಕಾರದ ಹೆಸರು, ಲಾಂಛನ ಇರಬೇಕು. ಅದನ್ನು ಹೊರತು ಪಡಿಸಿ, ಸರ್ಕಾರದ ಅಧೀನದಲ್ಲಿ ಬರುವ ಸರ್ಕಾರಿ ನಿಗಮ, ಮಂಡಳಿ, ಸಂಸ್ಥೆ, ಲೋಕಲ್ ಬಾಡಿ, ಮುನ್ಸಿಪಲ್ ವಾಹನಗಳಲ್ಲಿಯೂ ಸರ್ಕಾರದ ಲಾಂಛನ ಬಳಕೆಗೆ ಅವಕಾಶವಿಲ್ಲ‌. ಉದಾಹರಣೆಗೆ ಕೆಎಸ್​ಆರ್​ಟಿಸಿ ನಿಗಮವಾದ್ರೂ ಅಧಿಕಾರಿಗಳು ಸರ್ಕಾರದ ಚಿಹ್ನೆ, ಹೆಸರು ಬಳಸುವಂತಿಲ್ಲ. ಅನಧಿಕೃತವಾದ ಲಾಂಛನ ಅಥವಾ ಚಿಹ್ನೆ ಹೊಂದಿರುವ ವಾಹನಗಳ ವಿರುದ್ಧ ಮೋಟಾರು ವಾಹನಗಳ ಕಾಯ್ದೆಯಡಿ ಕ್ರಮ ಕೈಗೊಂಡು, ಕೇಸ್ ದಾಖಲಿಸಲಿಸುವ ಎಚ್ಚರಿಕೆಯನ್ನು ಸಾರಿಗೆ ಇಲಾಖೆ ನೀಡಿದೆ.

ಕೂಡಲೇ ಇಂತಹ ನಾಮಫಲಗಳನ್ನು ತೆರವುಗೊಳಿಸಬೇಕೆಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಖಾಸಗಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಖಾಸಗಿ ವಾಹನಗಳ ಮೇಲೆ ಸರ್ಕಾರದ ಯಾವುದೇ ಲಾಂಛನವನ್ನು ಬಳಸುವಂತಿಲ್ಲ ಸರ್ಕಾರಿ ಇಲಾಖೆ ಮತ್ತು ಬ್ಯಾಂಕ್ ಉದ್ಯೋಗಿಗಳು ತಮ್ಮ ಸ್ವಂತ ವಾಹನಗಳ ಮೇಲೆ ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಎಂದು ಹಾಕಿಕೊಂಡಿರುತ್ತಾರೆ ಅದನ್ನು ಮೊದಲು ತೆರವು ಮಾಡಬೇಕು.
ಇಷ್ಟು ದಿನಗಳ ಕಾಲ ತಮ್ಮ ಸ್ವಂತ ವಾಹನಗಳ ಮೇಲೆ ಅನಧಿಕೃತವಾಗಿ ಸರ್ಕಾರದ ಲಾಂಛನ ಬೋರ್ಡ್ ಹಾಕುತ್ತಿದ್ದವರಿಗೆ ಸಾರಿಗೆ ಇಲಾಖೆ ಸರಿಯಾಗಿ ಬಿಸಿ ಮುಟ್ಟಿಸಲು ಪ್ಲಾನ್ ಮಾಡ್ತಿದ್ದು ಈ ಕಾರ್ಯಾಚರಣೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಕಾದು ನೋಡಬೇಕಿದೆ.