ಬಡಗುತಿಟ್ಟಿನ ಶ್ರೇಷ್ಠ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ(67) ಅವರು ಇಂದು ನಸುಕಿನಲ್ಲಿ ಬೆಂಗಳೂರಿನ ಮಗನ ಮನೆಯಲ್ಲಿ ವಿಧಿವಶರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 46 ವರ್ಷ ಸೇವೆ ಸಲ್ಲಿಸಿದ್ದರು.ಪೆರ್ಡೂರು ಮೇಳದಲ್ಲಿ 28 ವರ್ಷ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ಆರಂಭಿಸಿದ್ದರು. ಹಿರೇ ಮಹಾಲಿಂಗೇಶ್ವರ ಮೇಳ ಮತ್ತು ಶಿರಸಿ ಮೇಳದಲ್ಲೂ ಭಾಗವತರಾಗಿ ನಂತರ ಪೆರ್ಡೂರು ಮೇಳದಲ್ಲಿ ಭಾಗವತರಾಗಿ ಉತ್ತುಂಗಕ್ಕೇರಿದ್ದರು. ಸಂಗೀತ ಅಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ಅದಕ್ಕೂ ಮೊದಲು ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪೂರು ಅವರ ಮೂಲಕ ರಂಗಸ್ಥಳದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು. ಪೆರ್ಡೂರು ಮೇಳ ಬಿಟ್ಟು ಹತ್ತು ವರ್ಷದ ನಂತರ ಮತ್ತೆ ಅದೇ ಮೇಳಕ್ಕೆ ಸೇರಿ ಒಂದು ವರ್ಷ ತಿರುಗಾಟ ಮಾಡಿದ್ದರು. ತಮ್ಮ ಅಪ್ರತಿಮ ಕಂಠದ ಮೂಲಕ ಅವರು ಯಕ್ಷಗಾನ ಪ್ರೇಮಿಗಳ ಮನ ಗೆದ್ದಿದ್ದರು.

ಕುಂದಾಪುರ : ಸುಬ್ರಹ್ಮಣ್ಯ ಧಾರೇಶ್ವರ (ಜನನ 1957, ಸೆ.5) ತನ್ನ 67ನೇ ವಯಸ್ಸಿನಲ್ಲಿ ಬೆಂಗಳೂರಿನ ಮನೆಯಲ್ಲಿ ಏ.25ರಂದು ಬೆಳಗ್ಗೆ ನಿಧನ ಹೊಂದಿದರು. ಯಕ್ಷ ರಂಗದ ತಜ್ಞ ಭಾಗವತರೆಂದೇ ಗುರುತಿಸಲ್ಪಡುತ್ತಿದ್ದ ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ. ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಧಾರೇಶ್ವರ ಭಾಗವತರು ಎಂದೇ ಖ್ಯಾತರಾದ ಸುಬ್ರಹ್ಮಣ್ಯ ಧಾರೇಶ್ವರ ಸುಮಾರು 40 ವರ್ಷಗಳಿಂದ ಇಂತಹ ಯಕ್ಷಮಾಲೆಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಅವರ ಜೊತೆಗೆ ಮಾತನಾಡುವುದೆಂದರೆ ಯಕ್ಷಗಾನದ ಕೊಳದಲ್ಲಿ ಮಿಂದುಬಂದಂತೆ. ಅವರ ನೆನಪಿನ ಬುತ್ತಿಯಲ್ಲಿ ಎಂತೆಂತಹ ಘಟನೆಗಳು ಇವೆ. ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ, ಕಾಳಿಂಗ ನಾವುಡರ ಸಹವರ್ತಿಯಾಗಿ, ಬಡಗುತಿಟ್ಟಿನ ಈ ಕಾಲದ ಬಹುತೇಕ ಎಲ್ಲ ಮಹಾನ್ ನಟರನ್ನು ಕುಣಿಸಿದ್ದರು.

ಹಂಗಾರಕಟ್ಟೆ ಯಕ್ಷಗಾನ ಭಾಗವತಿಗೆ ಕೇಂದ್ರದಲ್ಲಿ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿದ್ದರೂ ಸುಬ್ರಹ್ಮಣ್ಯ ಧಾರೇಶ್ವರ ಅಮೃತೇಶ್ವರಿ ಯಕ್ಷಗಾನ ಮೇಳವನ್ನು ಸೇರಿದ್ದು ಭಾಗವತರಾಗಿ ಅಲ್ಲ. ಎಲೆಕ್ಟ್ರಿಷಿಯನ್ ಆಗಿ. ಗೋಕರ್ಣದಲ್ಲಿ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದ, ನಾಟಕದ ಸಖ್ಯವನ್ನೂ ಹೊಂದಿದ್ದ ಸುಬ್ರಹ್ಮಣ್ಯ ಒಂದೆರಡು ಹಿಂದೂಸ್ತಾನಿ ರಾಗಗಳ ಪರಿಚಯವನ್ನೂ ಹೊಂದಿದ್ದರು. ಅದೇ ಅವರನ್ನು ಯಕ್ಷಗಾನ ರಂಗಕ್ಕೆ ಕರೆದು ತಂದಿತು.

1980ರಲ್ಲಿ ಎಲೆಕ್ಟ್ರಿಷಿಯನ್ ಆಗಿ ಅಮೃತೇಶ್ವರಿ ಮೇಳ ಸೇರಿದ ಧಾರೇಶ್ವರ ಸಂಗೀತಗಾರನಾಗಿಯೂ ಕೆಲಸ ಮಾಡಬೇಕಿತ್ತು. ಗಣಪತಿ ಪೂಜೆ ಮಾಡಿದ ನಂತರ ಲೈಟಿಂಗ್ ಮತ್ತು ಮೈಕ್ ಜವಾಬ್ದಾರಿ ನೋಡಿಕೊಳ್ಳಬೇಕಿತ್ತು. ‘ಇದಕ್ಕೆ ಮುಖ್ಯ ಕಾರಣ ಸಂಗೀತಗಾರನಿಗಿಂತ ಎಲೆಕ್ಟ್ರಿಷಿಯನ್ ಸಂಬಳ ಜಾಸ್ತಿ ಎನ್ನುವುದಾಗಿತ್ತು’ ಎಂದು ನಗುತ್ತಾರೆ.

ನಾರ್ಣಪ್ಪ ಉಪ್ಪೂರು, ಕಾಳಿಂಗ ನಾವುಡ ಮತ್ತು ಹಿಲ್ಲೂರು ಗಣಪತಿ ಹೆಗಡೆ ಅವರ ಬೆಂಬಲದಿಂದ ತಾವು ಭಾಗವತನಾಗಿ ರೂಪುಗೊಂಡಿದ್ದನ್ನು ನೆನಪಿಸಿಕೊಳ್ಳುವ ಅವರು ನಂತರ ಪ್ರಮುಖ ಭಾಗವತರಾಗಿ ಬೆಳೆದರು. ಪೆರ್ಡೂರು ಮೇಳದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಪ್ರಧಾನ ಭಾಗವತರಾಗಿ ನಿಜವಾದ ಅರ್ಥದಲ್ಲಿ ಮೆರೆದರು. ಹೊಸ ಪ್ರಸಂಗಗಳು ಬಂದ ಮೇಲೆ ಅವರು ಇನ್ನಷ್ಟು ಜನಪ್ರಿಯರಾದರು. ಪೌರಾಣಿಕ ಪ್ರಸಂಗದಲ್ಲಿಯೂ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಗೆದ್ದರು. ಹೊಸ ಪ್ರಯೋಗಗಳು ಹೊಸತರಲ್ಲಿ ಪೇಚಾಟಕ್ಕೆ ಕಾರಣವಾಗಿದ್ದೂ ಉಂಟು.

ಕೋಟ ‘ಅಮೃತೇಶ್ವರಿ ಮೇಳ’ ಶ್ರೀ ಪೆರ್ಡೂರು ಮೇಳದಲ್ಲಿ ಭಾಗವತರಾಗಿ, ಹೊಸರಾಗಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿದವರು.ಸುಮಾರು 400ಕ್ಕಿಂತಲೂ ಅಧಿಕ ಯಕ್ಷಗಾನದ ಆಡಿಯೋ ಕ್ಯಾಸೆಟ್ ಗಳಲ್ಲಿ ಧಾರೇಶ್ವರರ ಧ್ವನಿ ಇದೆ.

ಕರ್ನಾಟಕ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಬಿರುದು, ಸನ್ಮಾನಗಳಿಗೆ ಪಾತ್ರರಾಗಿರುವ ಧಾರೇಶ್ವರ ಅವರು ಸುಮಾರು ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ತೊಡಗಿಸಿಕೊಂಡಿದ್ದಾರೆ. ಗುರುಗಳಾದ ನಾರಾಯಣಪ್ಪ ಉಪ್ಪೂರರನ್ನು ಸದಾ ಸ್ಮರಿಸುತ್ತಿದ್ದ ಅವರು, ಸಾಧನೆಯ ಮೂಲಕ ಎತ್ತರಕ್ಕೇರಿದವರು. ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದು ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರು, ಕಾಳಿಂಗ ನಾವಡರರ ನಂತರ ಯಕ್ಷಗಾನ ರಂಗದಲ್ಲಿ ತನ್ನ ಇಂಪಾದ ಕಂಠದಿಂದ ಜನಪ್ರಿಯರಾದವರು.

ಮೂಲತಃ ಎಲೆಕ್ಟ್ರಿಕಲ್ ಅಂಗಡಿ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆಯ ಮಟ್ಟುಗಳನ್ನು ಕಲಿತರು. ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತರು. ಆರಂಭದಲ್ಲಿ ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಈ ಸಂದರ್ಭ ಗುರುಗಳಾದ ಉಪ್ಪೂರರ ಒತ್ತಾಸೆಯಿಂದ ಭಾಗವತಿಕೆ ಮಾಡಲು ಆರಂಭಿಸಿದರು. ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಶಿಯನ್ ಆಗಿ, ಹಗಲು ಮೈಕ್ ಜಾಹೀರಾತು ನೀಡುವ ಕೆಲಸವನ್ನು ಮಾಡುತ್ತಿದ್ದ ಧಾರೇಶ್ವರರು, ಬಳಿಕ ಭಾಗವತಿಕೆಯಲ್ಲೇ ತೊಡಗಿಸಿಕೊಂಡು ಜನಪ್ರಿಯರಾದರು. ಪೆರ್ಡೂರು ಮೇಳದಲ್ಲಿ ಸುಮಾರು 26ಕ್ಕೂ ಅಧಿಕ ವರ್ಷಗಳ ತಿರುಗಾಟ ಸಹಿತ ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ.

ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಯಕ್ಷಗಾನದ ಹಾಡುಗಳಾಗಿದ್ದು ಧಾರೇಶ್ವರರ ಕಂಠದಲ್ಲಿ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಸೂಪರ್ ಹಿಟ್ ಆಗಿವೆ.