ಮೂಡಲಗಿ:
ಸರಕಾರದ ಸಬ್ಸಿಡಿ ಯೊಜನೆಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆಗಮಿಸಿದ ಪ್ರಯುಕ್ತ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಿಸಾನ್ ಸಮ್ಮಾನ ಯೊಜನೆ, ಉಜ್ವಲಾ ಯೊಜನೆ, ಕಿಸಾನ್ ಯೋಜನೆ ಹಾಗೂ ಕೇಂದ್ರ ಸರ್ಕಾರದ ಇನ್ನಿತರ ಸಬ್ಸಿಡಿ ಯೋಜನೆಗಳ ಉಪಯೋಗ ಎಲ್ಲರೂ ತೆಗೆದುಕೊಳ್ಳಲಿ ಎನ್ನುವ ಉದ್ದೇಶವನ್ನು ತಿಳಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ನಿಮ್ಮೂರಿಗೆ ಬಂದಿದೆ ಎಂದು ಹೇಳಿದರು.

ರೈತರಿಗೆ ಅನುಕೂಲವಾಗುವ ಸಲುವಾಗಿ ಕೃಷಿ ಬಳಕೆಗೆ ಔಷಧ ಸಿಂಪಡಣೆ ಮಾಡಲು ಡ್ರೋಣ ಅನ್ನು, ಗ್ರಾಮದ ಯಾವುದಾದರೂ ಒಂದು ಮಹಿಳಾ ಸಂಘಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ ಹಾಗೂ ಮೋದಿ ಅವರು ದೇಶದ ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಉಜ್ವಲ ಯೋಜನೆಯ ಮುಖಾಂತರ ಉಚಿತ ಗ್ಯಾಸ್ ವಿತರಿಸುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಶಿವಾಪುರ ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಮಾಡಲು ಎಲ್ಲ ಇಲಾಖೆಯಿಂದ ಸಹಕಾರ ಪಡೆದು ಅಭಿವೃದ್ದಿ ಪಡಿಸಲಾಗುವುದು ಎಂದು ಹೇಳಿದರು.

ಸಾನ್ನಿಧ್ಯವನ್ನು ಶ್ರೀ ಅಡವಿಸಿದ್ದರಾಮ ಸ್ವಾಮೀಜಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮನವ್ವ ಗಿಡ್ಡವ್ವಗೊಳ ವಹಿಸಿದ್ದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಡಿ. ಚಿನ್ನನವರ, ಕೆನರಾ ಬ್ಯಾಂಕ್ ಮ್ಯಾನೇಜರ್ ಗಂಗನಾಥ್ ತಿವಾರಿ, ಡಾ.ದೀಪಾ, ಗ್ರಾಮ ಪಂಚಾಯತ್ ಸದಸ್ಯರಾದ ಎಂ. ಎಂ.ಜುಂಜರವಾಡ, ಬಿ.ಆರ್. ಸಾಯನ್ನವರ್, ಮಲ್ಲು ಹಡಗಿನಾಳ, ಪಿ.ಎಸ್. ಪಾಟೀಲ್, ಎಸ್.ವೈ. ಜುಂಜರವಾಡ, ಈರಪ್ಪಾ ಡವಳೇಶ್ವರ, ಪಿಡಿಒ ಎಸ್. ಎಲ್. ಬಬಲಿ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವಿವಿದ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಸವರಾಜ ಗುರುಸಿದ್ದನವರ್ ಸ್ವಾಗತಿಸಿದರು.ಎಂ.ಪಿ. ಲಂಗೊಟಿ ನಿರೂಪಿಸಿದರು. ಎಂ. ಬಿ.ಕುಡಚಿ ಪ್ರತಿಜ್ಞಾ ವಿಧಿ ಭೋದಿಸಿದರು.