ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಏ.27,28 ರಂದು ಬೆಳಗಾವಿ ನಗರಕ್ಕೆ ಆಗಮಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರವಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿನಾಂಕ:27 ರಂದು ಸಾಯಂಕಾಲ ಹಾಗೂ ದಿನಾಂಕ:28 ರಂದು ಮಧ್ಯಾಹ್ನದವರೆಗೆ ಬೆಳಗಾವಿ ನಗರದ ಆಯ್ದ ಮಾರ್ಗಗಳಲ್ಲಿ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ತಿಳಿಸಲಾಗಿದೆ.

ದಿನಾಂಕ: 27ರಂದು ಸಾಯಂಕಾಲ ಬಾಗಲಕೋಟೆ ರಸ್ತೆ ಹಾಗೂ ಸುವರ್ಣ ವಿಧಾನಸೌಧ ದಿಂದ ಹೊನಗಾ ವರೆಗಿನ ರಾಷ್ಟ್ರೀಯ ಹೆದ್ದಾರಿ, ಎರಡೂ ಬದಿಯ ಸರ್ವಿಸ್ ರಸ್ತೆಗಳು ಹಾಗೂ ದಿನಾಂಕ: 28 ರಂದು ಹೊನಗಾ ದಿಂದ ಸುವರ್ಣ ವಿಧಾನಸೌಧ ವರೆಗಿನ ರಾಷ್ಟೀಯ ಹೆದ್ದಾರಿ, ಎರಡೂ ಬದಿಯ ಸರ್ವಿಸ್ ರಸ್ತೆಗಳು ಹಾಗೂ ಬಾಗಲಕೋಟೆ ರಸ್ತೆಗಳ ಮಾರ್ಗಗಳಲ್ಲಿ ಸಾರ್ವಜನಿಕ ಸಂಚಾರದಲ್ಲಿ ತೊಡಕುಂಟಾಗುವ ಹಿನ್ನೆಲೆಯಲ್ಲಿ ಬದಲಿ ಮಾರ್ಗಗಳನ್ನು ಬಳಸಿಕೊಳ್ಳುವುದು.

ಕೊಲ್ಲಾಪುರ, ನಿಪ್ಪಾಣಿ ಕಡೆಗಳಿಂದ ಬೆಳಗಾವಿ ನಗರ ಕಡೆಗೆ ಬರುವ ಎಲ್ಲಾ ವಾಹನಗಳು ಸಂಕೇಶ್ವರದಿಂದ ಹುಕ್ಕೇರಿ ಮಾರ್ಗ ಬಳಸಿಕೊಳ್ಳುವುದು.

ಎಂ. ಕೆ. ಹುಬ್ಬಳ್ಳಿ, ಧಾರವಾಡ ಕಡೆಗಳಿಂದ ಬೆಳಗಾವಿ ನಗರ ಮೂಲಕ ಸಂಚರಿಸುವ ವಾಹನಗಳು ನೇಗಿನಹಾಳ, ನೇಸರಗಿ/ಬೆಂಡಿಗೇರಿ ಕ್ರಾಸ್ ಮಾರ್ಗಗಳನ್ನು ಬಳಸಿಕೊಳ್ಳುವುದು.

ನಿಪ್ಪಾಣಿ, ಕೊಲ್ಲಾಪುರ, ಯಮಕನಮರ್ಡಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು ರಾಮ ಡಾಭಾ ಹತ್ತಿರ ಬಲತಿರುವು ಪಡೆದುಕೊಂಡು ಮುಂದೆ ಸಂಚರಿಸುವುದು.

ಬಾಗಲಕೋಟೆ ಕಡೆಯಿಂದ ಬೆಳಗಾವಿ ನಗರ ಕಡೆಗೆ ಸಂಚರಿಸುವ ವಾಹನಗಳು ನೇಸರಗಿ ಗೋಕಾಕ ಮಾರ್ಗವಾಗಿ ಸಂಚರಿಸುವುದು.
ಬಾಗಲಕೋಟೆ, ರಾಯಚೂರು, ಯರಗಟ್ಟಿ ಮಾರ್ಗಗಳಲ್ಲಿ ಸಂಚರಿಸುವ ವಾ.ಕ.ರ.ಸಾ.ಸಂಸ್ಥೆಯ ಬಸ್‌ಗಳು ಕನಕದಾಸ ಸರ್ಕಲ್, ಕಣಬರಗಿ, ಖನಗಾಂವ ಸುಳೇಬಾವಿ, ಮಾರಿಹಾಳ ಪೊಲೀಸ್ ಠಾಣಾ ಕ್ರಾಸ್ ಮೂಲಕ ಬಾಗಲಕೋಟೆ ರಸ್ತೆಯಲ್ಲಿ ಸಂಚರಿಸಲಿದೆ.

ಬೆಳಗಾವಿ ನಗರದಿಂದ ಯಡಿಯೂರಪ್ಪ ರಸ್ತೆ ಮೂಲಕ ಅಲಾರವಾಡ ಬ್ರಿಡ್ಜ್ ಕಡೆಗೆ ಸಂಚರಿಸುವ ವಾಹನಗಳು ಬದಲಿ ಮಾರ್ಗ ಬಳಸಿಕೊಳ್ಳುವುದು.

27 ರಂದು ಸಾಯಂಕಾಲ ಹಾಗೂ ದಿನಾಂಕ: 28 ರಂದು ಮಧ್ಯಾಹ್ನದವರೆಗೆ ಎಲ್ಲಾ ಭಾರಿ ಹಾಗೂ ಮಧ್ಯಮ ಗಾತ್ರದ ವಾಹನಗಳು ಬೆಳಗಾವಿ ನಗರದಲ್ಲಿ ಸಂಚರಿಸುವ ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದು.

ಕಾರ್ಯಕ್ರಮಕ್ಕೆ ಬರುವ ವಾಹನಗಳ ನಿಲುಗಡೆ ಸ್ಥಳಗಳು:
I. ಪಾರ್ಕಿಂಗ್-೧ (ಜ್ಯೋತಿ ನಗರ, ಯಡಿಯೂರಪ್ಪ ಮಾರ್ಗದ ಬಳ್ಳಾರಿ ನಾಲಾ ಹತ್ತಿರ): ಬೆಳಗಾವಿ ನಗರದಿಂದ ಬರುವ ವಾಹನಗಳು
II. ಪಾರ್ಕಿಂಗ್-೨ (ಹಲಗಾ-ಮಚ್ಛೆ ಬೈಪಾಸ್ ರಸ್ತೆ): ನಿಪ್ಪಾಣಿ, ಅಥಣಿ, ಚಿಕ್ಕೋಡಿ, ರಾಯಬಾಗ, ಕುಡಚಿ, ಸಂಕೇಶ್ವರ, ಹುಕ್ಕೇರಿ ಭಾಗಗಳಿಂದ ಬರುವ ವಾಹನಗಳು.
III. ಪಾರ್ಕಿಂಗ್-೩ (ಅಲಾರವಾಡ ಸರ್ವಿಸ್ ರಸ್ತೆಯ ಪಶ್ಚಿಮ ಬದಿ): ಬೈಲಹೊಂಗಲ, ಬಾಗೇವಾಡಿ, ರಾಮದುರ್ಗ, ಸೌಂದತ್ತಿ ಭಾಗಗಳಿಂದ ಬರುವ ವಾಹನಗಳು.

ಪಾರ್ಕಿಂಗ್-೪ (ಅಲಾರವಾಡ ಸರ್ವಿಸ್ ರಸ್ತೆಯ ಪೂರ್ವ ಬದಿ): ಗೋಕಾಕ, ಅರಭಾಂವಿ, ಘಟಪ್ರಭಾ ಭಾಗಗಳಿಂದ ಬರುವ ವಾಹನಗಳು

ಈ ಮೇಲ್ಕಂಡ ಸ್ಥಳಗಳಲ್ಲಿಯೇ ವಾಹನ ನಿಲುಗಡೆ ಮಾಡಲು ಹಾಗೂ ಸಂಚಾರ ಮಾರ್ಗ ಬದಲಾವಣೆಗೆ ಸಾರ್ವಜನಿಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ ಎಂದು ಪೊಲೀಸ್ ಆಯುಕ್ತರು
ಬೆಳಗಾವಿ ನಗರ ಇವರು ತಿಳಿಸಿದ್ದಾರೆ.