ಮೈಸೂರು : ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಪರೂಪದ ಘಟನೆಯೊಂದು ವರದಿಯಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಬಸ್​ನಲ್ಲಿ ಹೊರಟ್ಟಿದ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ ನೀಡಿದ ಕಂಡಕ್ಟರ್ ಆದರೆ ಅವರು ತಮ್ಮೊಂದಿಗೆ ಒಯ್ದಿದ್ದ ನಾಲ್ಕು ಪಕ್ಷಿಗಳಿಗೆ ಬರೋಬ್ಬರಿ 444 ರೂ. ಮೌಲ್ಯದ ಟಿಕೆಟ್‌ ಅನ್ನು ಕೊಟ್ಟಿದ್ದಾರೆ…!

ಬುಧವಾರ (ಮಾರ್ಚ್‌ 27) ಬೆಳಗ್ಗೆ 8 ಗಂಟೆಗೆ ಅಜ್ಜಿ ಮೊಮ್ಮಗಳು ಉಚಿತ ಬಸ್ ಎಂದು ಬೆಂಗಳೂರಿನಿಂದ ಮೈಸೂರಿಗೆ ಕೆಎಸ್​ಆರ್​ಟಿಸಿ (KSRTC) ಬಸ್​ನಲ್ಲಿ ಹೊರಟ್ಟಿದ್ದಾರೆ. ಆದರೆ ಅವರು ತಮ್ಮ ಜೊತೆಗೆ 4 ಹಕ್ಕಿಗಳನ್ನು ಪಂಜರದ ಸಮೇತ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಕಂಡಕ್ಟರ್‌ ಅಜ್ಜಿ – ಮೊಮ್ಮಗಳಿಗೆ ಶಕ್ತಿ ಯೋಜನೆಯಂತೆ ಉಚಿತ ಟಿಕೆಟ್ ನೀಡಿದ್ದಾರೆ. ಆದರೆ ಅವರು ತಮ್ಮೊಂದಿಗೆ ತಂದಿದ್ದ ನಾಲ್ಕು ಲವ್‌ ಬರ್ಡ್ಸ್‌ಗಳಿಗೆ ಮಾತ್ರ ಹಣ ನೀಡಿ ಟಿಕೆಟ್‌ ತೆಗೆದುಕೊಳ್ಳಲೇಬೇಕು ಎಂದು ಹೇಳಿದ್ದಾರೆ.

ನಾಲ್ಕು ಲವ್‌ ಬರ್ಡ್ಸ್‌ಗಳಿಗೆ ತಲಾ ಒಂದಕ್ಕೆ 111 ರೂ. ಗಳಂತೆ ಒಟ್ಟು 444 ರೂ. ಟಿಕೆಟ್‌ ನೀಡಿದ್ದಾರೆ. ಆದರೆ ಮಹಿಳೆ ಟೆಕೆಟ್ ಯಾಕೆ ಎಂದು ಪ್ರಶ್ನಿಸಿದ್ದಾರೆ. ಆಗ ಕಂಡಕ್ಟರ್‌ ಪ್ರಾಣಿ-ಪಕ್ಷಗಳನ್ನು ಒಯ್ದರೆ ಟೆಕೆಟ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಆಗ ಬೇರೆ ಆಯ್ಕೆ ಇಲ್ಲದೇ ಅವರು ಟೆಕೆಟ್ ಹಣಪಾವತಿಸಿದ್ದಾರೆ. ಪಕ್ಷಿಗಳಿಗೆ ಕಂಡಕ್ಟರ್‌ ಅರ್ಧ ಟಿಕೆಟ್‌ ನೀಡಿದ್ದಾರೆ.
ಈ ಹಿಂದೆ ಕೋಳಿಗೆ ಟಿಕೆಟ್‌ ತೆಗೆದುಕೊಳ್ಳುವ ವಿಚಾರಕ್ಕೂ ಕೂಡ ಅನೇಕ ಕಡೆ ಬಸ್‌ ಕಂಡಕ್ಟರ್‌ ಹಾಗೂ ಜನರ ನಡುವೆ ಗಲಾಟೆಗಳಾಗಿವೆ. ಎರಡು ವರ್ಷದ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಿಬ್ಬಂದಿ ಬಸ್ ಹತ್ತಿ ಬಂದು ಚೆಕ್ ಮಾಡಿದಾಗ ಪಕ್ಷಿಗಳಿಗೆ ಯಾವುದೇ ಟಿಕೆಟ್ ತೆನೀಡಿಲ್ಲವೆಂದು ಕಂಡಕ್ಟರ್ ಅಮಾನತಾದ ಉದಾಹರಣೆಗಳೂ ಇವೆಯಂತೆ.
ಕೆಎಸ್‌ಆರ್‌ಟಿಸಿ ನಿಯಮದ ಪ್ರಕಾರ ಪ್ರಯಾಣಿಕರು ಕರೆತರುವ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಅರ್ಧ ಟಿಕೆಟ್ ನೀಡಬೇಕು. ಟಿಕೆಟ್ ನೀಡದಿದ್ದರೆ, ಪ್ರಯಾಣಿಕನಿಗೆ ಟಿಕೆಟ್ ಬೆಲೆಯ ಶೇ.10ರಷ್ಟು ದಂಡ ಹಾಗೂ ನಿರ್ವಾಹಕನಿಗೆ ಅಮಾನತು ಶಿಕ್ಷೆ ನೀಡಲಾಗುತ್ತದೆ.