ಶಿವಮೊಗ್ಗ : ಮಾರುತಿ ಓಮ್ನಿ ಹಾಗೂ ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 12 ಮಂದಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ಹೊಸನಗರ ತಾಲೂಕಿನ ಎಂ.ಗುಡ್ಡೇಕೊಪ್ಪದಲ್ಲಿ ಈ ದುರ್ಘಟನೆ ನಡೆದಿದೆ. ಓಮ್ನಿಯಲ್ಲಿದ್ದ ಒಂದೇ ಕುಟುಂಬದ 6 ಮಕ್ಕಳು ಸೇರಿದಂತೆ 12 ಮಂದಿಗೆ ಗಂಭೀರ ಗಾಯಗಳಾಗಿವೆ. ಇವರೆಲ್ಲರನ್ನು ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಬುಲ್ಡೋಜರ್ ಗುಡ್ಡ ನಿವಾಸಿಗಳಾದ ಸತ್ಯಪ್ಪ, ಶರಾವತಿ, ಜಾನಕಮ್ಮ, ಲೀಲಾವತಿ, ಪ್ರಶಾಂತ ಹಾಗೂ 11 ವರ್ಷದೊಳಗಿನ ಮಕ್ಕಳಾದ ಶ್ರವಣ್, ಶ್ರೇಯಾನ್, ಶ್ರೀಮತಿ, ಶ್ರೀಶ, ಶ್ರಾವಣಿ, ಶ್ರಾವ್ಯ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗೋಳಿಗರಡಿ ದೇವಸ್ಥಾನಕ್ಕೆ ಭೇಟಿ ನೀಡಿ ಊರಿಗೆ ವಾಪಾಸ್ಸಾಗುತ್ತಿದ್ದರು ಎನ್ನಲಾಗಿದೆ.
ಎಂಗುಡ್ಡೆಕೊಪ್ಪ ಗ್ರಾ.ಪಂ. ಕಚೇರಿ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಓಮ್ನಿ ಸಂಪೂರ್ಣ ಜಖಂಗೊಂಡಿದೆ. ಚಾಲಕನನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಗಾಯಾಳುಗಳಿಗೆ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲದ ಕೆಎಂಸಿ ಮತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹೊಸನಗರ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹೊಸನಗರ ತಾಲೂಕಿನಾದ್ಯಂತ ಯಮಸ್ವರೂಪಿ ಮರಳು ಸಾಗಣೆ ಟಿಪ್ಪರ್ ಲಾರಿಗಳು ವೇಗ ಮಿತಿ ಅನುಸರಿಸದೇ ಅತಿ ವೇಗದಿಂದ ವಾಹನಗಳನ್ನು ಚಲಾಯಿಸುತ್ತಿರುವ ಕಾರಣ ಪದೇಪದೇ ಇದೇ ರೀತಿ ಅಪಘಾತಗಳು ನಡೆಯುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.