ಬೆಳಗಾವಿ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಉತ್ತಮವಾಗಿ ಆಗುವ‌ ಮುನ್ಸೂಚನೆ ಇದ್ದು, ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿವುವದರ ಮೂಲಕ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀಳಬಹುದಾದ ಮರಗಳನ್ನು ಗುರುತಿಸಿ ಕೂಡಲೇ ಅಂತಹ ಮರಗಳನ್ನು ತೆಗೆಸಲು ಕ್ರಮ ಜರುಗಿಸಿ ಸಂಭವನೀಯ ಜೀವಹಾನಿ ತಪ್ಪಿಸಲು ಕ್ರಮ‌ ಜರುಗಿಸಬೇಕು ಎಂದರು.

ಅದೇ ರೀತಿ ವಿದ್ಯುತ್ ಕಂಬಗಳು ವಾಲಿದ್ದರೆ ಅಂತಹವುಗಳ ದುರಸ್ಥಿಗೆ ಕ್ರಮ‌ ಜರುಗಿಸಬೇಕು. ವಿದ್ಯುತ್ ತಂತಿಗಳಿಗೆ ಮರದ ಕೊಂಬೆಗಳು ತಾಗುತ್ತಿದ್ದರೆ ಮುಂಜಾಗ್ರತಾ ಕ್ರಮವಾಗಿ ಅವುಗಳನ್ನು ತೆಗೆಸಲು ಕ್ರಮ ವಹಿಸಬೇಕು.

ಮಳೆಯಿಂದಾಗಿ ಅನೇಕ ಸಾಂಕ್ರಾಮಿಕ ರೋಗಗಳು ಉದ್ಭವವಾಗುವ ಸಂಭವವಿದ್ದು, ಈ ಕುರಿತು ಆರೋಗ್ಯ ಇಲಾಖೆ ಈಗಿನಿಂದಲೇ ಅಗತ್ಯ ಕ್ರಮ ಜರುಗಿಸುವುದರ ಮೂಲಕ ಜನಜಾಗೃತಿಗೆ ಮುಂದಾಗುವಂತೆ ತಿಳಿಸಿದರು.

ಸಾರ್ವಜನಿಕರಿಗೆ ಕುಡಿಯಲು ಪೂರೈಕೆ ಮಾಡುತ್ತಿರುವ ನೀರು ಪರೀಕ್ಷಿಸಿ ಯೋಗ್ಯವಿದ್ದಲ್ಲಿ ಸರಬರಾಜು ಮಾಡಬೇಕು. ಅಲ್ಲದೇ ಸಾರ್ವಜನಿಕರಿಗೆ ನೀರನ್ನು ಕುದಿಸಿ ಆರಿಸಿ ಕುಡಿಯಲು ತಿಳಿ ಹೇಳಬೇಕು ಎಂದು ಸೂಚಿಸಿದರು.

ನದಿ ಪಾತ್ರದ ಪ್ರದೇಶಗಳಲ್ಲಿನ ಜನವಸತಿಗಳಲ್ಲಿ ಪ್ರವಾಹ ಕುರಿತು ಜಾಗೃತಿ ಮೂಡಿಸಿ ಸಾರ್ವಜನಿಕರು ತಮ್ಮ‌ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಾಗೃತಿ ಮೂಡಿಸಬೇಕು.
ಶಿಥಿಲಾವಸ್ಥೆಯಲ್ಲಿರುವ ಹಾಗೂ ಸೋರುತ್ತಿರುವ ಶಾಲಾ ಕಟ್ಟಡ, ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ತರಗತಿಗಳನ್ನು ನಡೆಸದಂತೆ ನಿಗಾವಹಿಸಲು ಕಟ್ಟುನಿಟ್ಟಿನ ಸೂಚನ ನೀಡಿದರು.

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಜನ ಜಾನುವಾರುಗಳ ರಕ್ಷಣೆಗೆ ಎಸ್.ಡಿ.ಆರ್.ಎಫ್ ತಂಡವು ಅಗತ್ಯದ ರಕ್ಷಣಾ ಸಾಮಗ್ರಿಗಳೊಂದಿಗೆ ಸನ್ನದ್ಧವಾಗಿರುವಂತೆ ಹೇಳಿದರು. ಪ್ರವಾಹ ಸಂದರ್ಭದಲ್ಲಿ ಬೇಕಾಗುವಂತಹ ರಕ್ಷಣಾ ಸಾಮಗ್ರಿಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವದರ ಜೊತೆಗೆ ಇನ್ನೂ ಹೆಚ್ಚಿನ‌ ರಕ್ಷಣಾ ಸಾಮಗ್ರಿಗಳ ಅವಶ್ಯಕತೆವಿದ್ದರೆ ಈ ಕುರಿತು ಅಗತ್ಯದ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಪ್ರವಾಹ ಸಂದರ್ಭದಲ್ಲಿ ಜಾನುವಾರುಗಳಿಗೆ ಬೇಕಾದಂತಹ ಅಗತ್ಯದ ಮೇವು, ಔಷಧಿಗಳ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಜಾನುವಾರುಗಳ ಸುರಕ್ಷಿತೆಗಾಗಿ ಗೋಶಾಲೆಗಳನ್ನು ಪ್ರಾರಂಭಿಸಲು ಸೂಕ್ತ ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳಲು ತಿಳಿಸಿದರು.

ಮಳೆಯಿಂದಾಗಿ ರಸ್ತೆಗಳು, ವಿದ್ಯುತ್ ಕಂಬಗಳು ಹಾನಿಗೊಳಗಾದರೆ ಕೂಡಲೇ ಅಂತಹ ರಸ್ತೆ ಹಾಗೂ ವಿಧ್ಯುತ ಕಂಬಗಳ ದುರಸ್ಥಿಗೆ ಕ್ರಮ ಜರುಗಿಸಬೇಕು. ಕುಡಿಯುವ ನೀರು ಸರಬರಾಜುವಿನಲ್ಲಿ ಯಾವುದೇ ಅಡಚಣೆಯಾಗದಂತೆ ನಿಗಾವಹಿಸಬೇಕು ಮೇಲ್ಮಟ್ಟದ ಜಲಸಂಗ್ರಹಗಾರಗಳ ಸ್ಥಿತಿಗತಿಗಳನ್ನು ಪರೀಶಿಲಿಸಿ ಅವುಗಳ ಸ್ವಚ್ಛತೆ ಬಗ್ಗೆ ಕ್ರಮ ಜರುಗಿಸಲು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯೊಳಗೆ ಬರುವಂತಹ ಎಲ್ಲ ಕೆರೆಗಳ ಸ್ಥಿತಿಗತಿಗಳ ಬಗ್ಗೆ ಪರೀಶಿಲಿಸಬೇಕು. ಬ್ಯಾರೇಜಗಳ ಗೇಟಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಬೇಕು.

ಜಿಲ್ಲಾ‌ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಪಿ.ಎನ್.ಲೋಕೇಶ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ‌ಮಟ್ಟದ ಹಿರಿಯ ಅಧಿಕಾರಿಗಳು ಹಾಜರಿದ್ದರು.