ಬೆಳಗಾವಿ: ಬಿಜೆಪಿಯವರು ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಮೋದಿ ನಾನೇ ಗ್ಯಾರಂಟಿ ಎನ್ನುತ್ತಿದ್ದಾರೆ. ಇವರ ಮೇಲೆ ಯಾವ ಗ್ಯಾರಂಟಿ ಇಟ್ಟುಕೊಳ್ಳಲು ಸಾಧ್ಯ? ಇಲ್ಲಿಯವರೆಗೆ ನೀಡಿದ್ದ ಆಶ್ವಾಸನೆಗಳಲ್ಲಿ ಯಾವುದನ್ನು ಈಡೇರಿಸಿದ್ದಾರೆ? ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೋಕಾಕ ಮತ್ತು ಅರಬಾವಿ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಸರಕಾರದ ಭರವಸೆ ನೀಡಿದ್ದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದೆ. ಅವುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸವನ್ನೂ ಮಾಡಿದೆ. ಎಲ್ಲ ಗ್ಯಾರಂಟಿಗಳಿಂದಲೂ ಜನರಿಗೆ ಪ್ರಯೋಜನವಾಗಿದೆ. ಹಾಗಾಗಿ ಈ ಬಾರಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಕೇಂದ್ರದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಅವರು ಹೇಳಿದರು.

ಕೇವಲ ಭಾವನೆಗಳ ಮೇಲೆ ಜನರು ಬದುಕಲು ಸಾಧ್ಯವಿಲ್ಲ. ಬಿಜೆಪಿಯವರ ಯೋಜನೆಗಳು ಕೇವಲ ಘೋಷಣೆ ಮಾಡುವುದಕ್ಕೆ ಮಾತ್ರ ಸೀಮಿತ. ಅವುಗಳು ಎಂದಿಗೂ ಜಾರಿಯಾಗುವುದಿಲ್ಲ. ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಬೇಕು. ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಹಾಗಾಗಿ ಉತ್ಸಾಹಿ ಯುವಕರಾಗಿರುವ ಮೃಮಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ ಬಹುಮತದಿಂದ ಆರಿಸಿಕಳಿಸಿ ಎಂದು ವಿನಂತಿಸಿದರು.

ನೆರವಿಗೆ ಬಾರದ ಬಿಜೆಪಿ – ಲಕ್ಷ್ಮೀ ಹೆಬ್ಬಾಳಕರ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಬೆಳಗಾವಿ ಕ್ಷೇತ್ರದಲ್ಲಿ ಮೃಣಾಲ ಹೆಬ್ಬಾಳಕರ್ ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಇಬ್ಬರೂ ಉತ್ಸಾಹಿಗಳಿದ್ದು, ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲಿದ್ದಾರೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಹೆಚ್ಚು ಬಹುಮತದಿಂದ ಆರಿಸಿ ಕಳಿಸಬೇಕು ಎಂದು ವಿನಂತಿಸಿದರು.

ಕೋವಿಡ್ ಬಂದಾಗ ಕೇಂದ್ರದ ಬಿಜೆಪಿ ಸರಕಾರ ಯಾವುದೇ ರೀತಿಯಲ್ಲಿ ರಾಜ್ಯದ ನೆರವಿಗೆ ಬರಲಿಲ್ಲ. ಈ ಭಾಗವನ್ನು ಪ್ರತಿನಿಧಿಸುವ ಸಂಸದರು ದೆಹಲಿಯಲ್ಲಿ ಧ್ವನಿ ಎತ್ತಿದ್ದನ್ನು ಯಾರಾದರೂ ನೋಡಿದ್ದಾರಾ? ಸಂಕಷ್ಟದ ಸಂದರ್ಭದಲ್ಲಿ ಯಾರು ನ್ಯಾಯವನ್ನು ಒದಗಿಸಬೇಕಿತ್ತೋ ಅವರು ನಮ್ಮ ಸಹಾಯಕ್ಕೆ ಬರಲಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಾಣ ಮಾಡಿದೆ. ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದ ಜನರ ನೆರವಿಗೆ ಬಂದಿದೆ ಎಂದು ಹೆಬ್ಬಾಳಕರ್ ಹೇಳಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಮಹಿಳೆಯರು ಸಂಕಷ್ಟದಲ್ಲಿದ್ದರು, ಬೆಲೆ ಏರಿಕೆಯಾಗಿತ್ತು, ಪೆಟ್ರೋಲ್, ಡಿಸೆಲ್ ಬೆಲೆ ಏರಿತ್ತು. ಕೋವಿಡ್ ಬಂದು ಮತ್ತಷ್ಟು ಸಮಸ್ಯೆ ತಂದಿತ್ತು. ಜನರಿಗೆ ನೆಮ್ಮದಿ ನೀಡಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದರು. ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ಧಿ ಸಾಧ್ಯ, ಕಾಂಗ್ರೆಸ್ ಪಕ್ಷ ಕೊಟ್ಟ ವಚನವನ್ನು ಪಾಲನೆ ಮಾಡುವ ಪಕ್ಷ. ಹಾಗಾಗಿ ಎರಡೂ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಪತಾಕೆ ಹಾರಿಸುವ ಕೆಲಸವನ್ನು ಮಾಡಬೇಕು. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ ಎನ್ನುವ ಬಿಜೆಪಿಯವರ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಕಾಗಿಲ್ಲ. ಐದೂ ಗ್ಯಾರಂಟಿಗಳು ನಿರಂತರವಾಗಿ ನಡೆಯುತ್ತವೆ, ಅಭಿವೃದ್ಧಿ ಕೆಲಸಗಳೂ ನಿರಂತರವಾಗಿರುತ್ತವೆ ಎಂದು ಅವರು ತಿಳಿಸಿದರು.

ಬಿಜೆಪಿಯವರು ಬರೆ ಬುರುಡೆ ಬಿಡ್ತಾರೆ, ಸಬ್ ಕಾ ಸಾತ್ ಅಲ್ಲ, ಅವರದ್ದು ಸಬ್ ಕಾ ಸ್ವಾರ್ಥ್. ನಾವು ಸ್ವಾರ್ಥದ ರಾಜಕಾರಣ ಮಾಡುವುದಿಲ್ಲ . ಸಾಮಾಜಿಕ ಬದ್ಧತೆ, ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಬಿಜೆಪಿಯವರಿಗೆ ನಮ್ಮ ಜಿಲ್ಲೆಯಲ್ಲಿ ಒಬ್ಬರೂ ಅಭ್ಯರ್ಥಿ ಸಿಗಲಿಲ್ಲ, ಹೊರಗಡೆಯಿಂದ ಅಭ್ಯರ್ಥಿ ತರಬೇಕಾಯಿತು. ಇದು ನಮ್ಮ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಅಧಿಕಾರ ಇಲ್ಲದಿದ್ದಾಗಲೂ ಸಮಾಜ ಸೇವೆ ಮಾಡುವವರೇ ನಿಜವಾದ ಜನಪ್ರತಿಗಳು. ನಾನು ನನ್ನ ಗ್ರಾಮೀಣ ಕ್ಷೇತ್ರದಲ್ಲಿ 103 ದೇವಸ್ಥಾನ, 7 ಜೈನ ಬಸದಿ, 2 ವಾಲ್ಮೀಕಿ ಭವನ, 12 ಅಂಬೇಡ್ಕರ್ ಭವನ, ಮಸೀದಿ, ಚರ್ಚ್ ಎಲ್ಲವನ್ನೂ ನಿರ್ಮಾಣ ಮಾಡಿದ್ದೇನೆ. ಸರ್ವ ಜನಾಂಗವನ್ನು ಸಮಭಾವದಿಂದ ನೋಡುತ್ತಿದ್ದೇನೆ. ನಾವು ಭಾರತೀಯರು. ನಮ್ಮ ಸಂಸ್ಕೃತಿಯನ್ನು ಮರೆಯಲು ಸಾಧ್ಯವಿಲ್ಲ. ದೇವರನ್ನು ಪೂಜೆ ಮಾಡುವವರು, ಮಠಾಧೀಶರಿಗೆ ಗೌರವ ಕೊಡುವವರು. ದೇಶಕ್ಕಾಗಿ ತ್ಯಾಗ ಮಾಡಿದ ಪಕ್ಷ ನಮ್ಮದು. ನಾವು ದೇಶಪ್ರೇಮಿಗಳು, ದೇಶ ಭಕ್ತರು. ಬಿಜೆಪಿಯವರಂತೆ ತೋರಿಕೆಗೆ ಮಾಡುವವರಲ್ಲ ನಾವು ಎಂದು ಅವರು ಹೇಳಿದರು.

2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದಾಗ ಗೋಕಾಕ ಮತ್ತು ಅರಬಾವಿ ಎರಡೂ ಕ್ಷೇತ್ರದಲ್ಲಿ ನನಗೆ ಲೀಡ್ ಆಗಿತ್ತು. ಅದೇ ಪ್ರೀತಿ, ವಿಶ್ವಾಸವನ್ನು ಈಗಲೂ ತೋರಿಸಿ. ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ, ರಾಜ್ಯದಲ್ಲಿ ನಮ್ಮ ಸರಕಾರವಿದೆ. ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಅಭಯ ನೀಡಿದರು.

ಲೋಕಸಭಾ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಡಾ.ಮಹಾಂತೇಶ ಕಡಾಡಿ, ಚಂದ್ರಶೇಖರ್ ಕೊಣ್ಣೂರ್, ಸಿದ್ದಲಿಂಗ ದಳವಾಯಿ, ಅನಿಲಕುಮಾರ ದಳವಾಯಿ, ಬಸನಗೌಡ ಹೊಳೆಯಾಚೆ, ವಿವೇಕ್ ಜತ್ತಿ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಡಾಂಗೆ, ಗೋಕಾಕ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಕೀರ್ ನದಾಫ್, ರಮೇಶ ಉಟಗಿ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಅರಳಿ, ಅರಭಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೂರ್ಯಕಾಂತ ಮಗದುಮ್ಮ, ಗಂಗಾಧರ್ ಬಡಕುಂದ್ರಿ, ಕಲ್ಲಪ್ಪಗೌಡ ಲಕ್ಕಾರ್, ಲಕ್ಕಣ್ಣ ಸವಸುದ್ದಿ, ಭರಮಣ್ಣ ಉಪ್ಪಾರ, ಶಂಕರ ಗಿಡನ್ನವರ, ಶಂಕರ ಹುರಕಡ್ಲಿ, ಬಿ.ಬಿ. ಬೆಳಕೂಡ, ಕಲ್ಪನಾ ಜೋಶಿ, ರಾಜಾ ಸಲೀಂ, ರಾಜದೀಪ್ ಕೌಜಲಗಿ ಉಪಸ್ಥಿತರಿದ್ದರು.