ಮೈಸೂರು :
ಸಂಸತ್ತಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಅಮಾನತ್ತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದವರ ವಾದವನ್ನು ಕೇಳಬೇಕು. ಜನರ ತೀರ್ಪಿನಂತೆ ಸಂಸದರು ಲೋಕಸಭೆ ಅಥವಾ ವಿಧಾನಸಭೆಗೆ ಬಂದಿರುತ್ತಾರೆ. ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಸಭಾಧ್ಯಕ್ಷರು ಸೇರಿದಂತೆ ಯಾರಿಗೂ ಸಾಧ್ಯವಿಲ್ಲ ಎಂದರು.

ಲೋಕಸಭೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಸದರನ್ನು ಅಮಾನತ್ತು ಮಾಡಿರಲಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಕೇಂದ್ರ ಸರ್ಕಾರದವರು ಪ್ರಭಾಪ್ರಭುತ್ವವನ್ನು ಹಾಗೂ ಜನರ ಭಾವನೆಯನ್ನು ಗೌರವಿಸುತ್ತಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರು ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ ಎಂದರು.

*ಇಂಡಿಯ ಸಭೆಯಲ್ಲಿ ತೀರ್ಮಾನ :*

ಇಂಡಿಯ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಪ್ರಸ್ತಾಪ ಮಾಡಲಾಗಿರುವ ಕುರಿತು ಅಭಿಪ್ರಾಯ ಕೇಳಿದ್ದಕ್ಕೆ, ಇಂಡಿಯ ಸಭೆಯಲ್ಲಿ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.
ಜಮೀರ್‌ ಅಹ್ಮದ್‌ ಅವರ ಜೊತೆ ಐಷಾರಾಮಿ ವಿಮಾನದಲ್ಲಿ ತಿರುಗಾಡಿದ ಕುರಿತು ಬಿಜೆಪಿಯವರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ನರೇಂದ್ರ ಮೋದಿಯವರು ಯಾವುದರಲ್ಲಿ ತಿರುಗಾಡುತ್ತಾರೆ ಎಂದು ಅವರಿಗೇ ಕೇಳಿ ಎಂದು ತಿಳಿಸಿದರು.