| Latest Version 9.0.7 |

National News

ಜೂನ್ ಮೊದಲಾರ್ಧದಲ್ಲಿ ಕೈಕೊಟ್ಟ ಮುಂಗಾರು ; ದೇಶಾದ್ಯಂತ ಶೇ. 32 ರಷ್ಟು ಮಳೆ ಕೊರತೆ; ಐಎಂಡಿ ಕಳವಳಕಾರಿ ವರದಿ

 

 

 

ನವದೆಹಲಿ: ಜೂನ್ 1ರಿಂದ ಆರಂಭವಾಗಿರುವ ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಋತುವಿನ ಮೊದಲ ಹದಿನೈದು ದಿನಗಳಲ್ಲಿ ದೇಶಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ದೇಶದ ಶೇಕಡಾ 65 ರಷ್ಟು ಭಾಗದಲ್ಲಿ ಭಾರಿ ಮಳೆ ಕೊರತೆಯಾದೆ. ಈ ಅವಧಿಯಲ್ಲಿ ಭಾರತದಾದ್ಯಂತ 42.4 ಮಿ.ಮೀ ಮಳೆ ಸುರಿದಿದ್ದು, ಇದು ವಾಡಿಕೆ ಮಳೆಯಾದ 62.1 ಮಿ.ಮೀ.ಗೆ ಹೋಲಿಸಿದರೆ, ಶೇ. 32 ರಷ್ಟು ಕೊರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ದೇಶದ ಒಟ್ಟು ನಾಲ್ಕು ಹವಾಮಾನ ವಲಯಗಳ ಪೈಕಿ ಮೂರು ವಲಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕೇವಲ ವಾಯುವ್ಯ ಭಾರತದಲ್ಲಿ ಮಾತ್ರ ಶೇ. 8 ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ನೋಡುವುದಾದರೆ ಜೂನ್ 1 ರಿಂದ 15 ರವರೆಗಿನ ಅವಧಿಯಲ್ಲಿ ದೇಶದ ಶೇಕಡಾ 65 ರಷ್ಟು ಭಾಗ ಮಳೆ ಕೊರತೆಯನ್ನು ಎದುರಿಸುತ್ತಿದೆ.

 

ಪ್ರಾದೇಶಿಕ ಮಳೆ ವಿವರ: ಎಲ್ಲೆಲ್ಲಿ ಎಷ್ಟು ಕೊರತೆ?

ದಕ್ಷಿಣ ಪರ್ಯಾಯ ದ್ವೀಪ: ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿ ಒಳಗೊಂಡ ಈ ವಲಯದಲ್ಲಿ ಜೂನ್ 15 ರವರೆಗೆ 68.2 ಮಿಮೀ ಮಳೆಯಾಗಿದೆ. ಇದು ಅದರ ದೀರ್ಘಾವಧಿ ಸರಾಸರಿ (LPA) ಮಳೆ ಅಥವಾ ವಾಡಿಕೆ ಮಳೆ 75 ಮಿಮೀಗೆ ಹೋಲಿಸಿದರೆ ಶೇಕಡಾ 9 ರಷ್ಟು ಕಡಿಮೆಯಾಗಿದೆ.

ಪೂರ್ವ ಮತ್ತು ಈಶಾನ್ಯ ಭಾರತ: ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಶೇಕಡಾ 41 ರಷ್ಟು ಭಾರಿ ಮಳೆ ಕೊರತೆಯಾಗಿದೆ. ಇಲ್ಲಿ ವಾಡಿಕೆ ಮಳೆ 136 ಮಿಮೀ ಆಗಬೇಕಾಗಿದ್ದು, ಕೇವಲ 80.8 ಮಿಮೀ ಮಳೆಯಾಗಿದೆ.

ಕೇಂದ್ರ ಭಾರತ: ಒಡಿಶಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ಒಳಗೊಂಡ ಈ ವಲಯದಲ್ಲಿ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಶೇ. 57 ರಷ್ಟು ಕೊರತೆ ಕಂಡುಬಂದಿದೆ. ಇಲ್ಲಿನ ಸಾಮಾನ್ಯ ಮಳೆ 53 ಮಿಮೀಗೆ ಪ್ರತಿಯಾಗಿ ಕೇವಲ 22.7 ಮಿಮೀ ಮಳೆಯಾಗಿದೆ.

ವಾಯುವ್ಯ ಭಾರತ: ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಒಳಗೊಂಡ ಈ ವಲಯದಲ್ಲಿ ಮಾತ್ರ ಪರಿಸ್ಥಿತಿ ಉತ್ತಮವಾಗಿದ್ದು, ಸಾಮಾನ್ಯ ಮಳೆ 25.4 ಮಿಮೀ ಬದಲಿಗೆ 27.5 ಮಿಮೀ ಮಳೆಯಾಗುವ ಮೂಲಕ ಶೇ. 8 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.

 

ಹವಾಮಾನ ಉಪವಿಭಾಗಗಳ ಸ್ಥಿತಿಗತಿ

ದೇಶದ ಒಟ್ಟು 36 ಹವಾಮಾನ ಉಪವಿಭಾಗಗಳ ಪೈಕಿ ಮಳೆಯ ಹಂಚಿಕೆ ಈ ಕೆಳಗಿನಂತಿದೆ:

ಅತ್ಯಂತ ತೀವ್ರ ಕೊರತೆ (ಶೇ. 60-99 ಕಡಿಮೆ): 6 ಉಪವಿಭಾಗಗಳು

ಮಳೆ ಕೊರತೆ (ಶೇ. 20-59 ಕಡಿಮೆ): 15 ಉಪವಿಭಾಗಗಳು

ವಾಡಿಕೆ ಮಳೆ (LPA ನ ಶೇ. 81-119): 8 ಉಪವಿಭಾಗಗಳು

ಹೆಚ್ಚುವರಿ ಮಳೆ (LPA ನ ಶೇ. 120-159): 5 ಉಪವಿಭಾಗಗಳು

ಅತಿ ಹೆಚ್ಚು ಮಳೆ (ಶೇ. 60 ಕ್ಕಿಂತ ಹೆಚ್ಚು): ಕೇವಲ ಪೂರ್ವ ರಾಜಸ್ಥಾನ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳು ಮಾತ್ರ ಈ ಪಟ್ಟಿಯಲ್ಲಿವೆ.

ಮುಂಗಾರು ಮಳೆ ಸ್ಥಿತಿಗತಿ…

ಐಎಂಡಿ ಸೋಮವಾರ ನೀಡಿರುವ ಮಾಹಿತಿ ಪ್ರಕಾರ, ಮುಂಗಾರು ಮಾರುತಗಳು ಮತ್ತಷ್ಟು ಮುನ್ನಡೆಯಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಮುಂದಿನ 4-5 ದಿನಗಳಲ್ಲಿ ಕೇಂದ್ರ ಅರಬ್ಬಿ ಸಮುದ್ರದ ಇನ್ನು ಕೆಲವು ಭಾಗಗಳು, ಮಹಾರಾಷ್ಟ್ರ, ಕರ್ನಾಟಕದ ಉಳಿದ ಭಾಗಗಳು, ತೆಲಂಗಾಣ, ಒಡಿಶಾ, ಜಾರ್ಖಂಡ್, ಬಿಹಾರ ಮತ್ತು ಛತ್ತೀಸ್‌ಗಢದ ಕೆಲವು ಭಾಗಗಳಿಗೆ ಮುಂಗಾರು ವ್ಯಾಪಿಸಲಿದೆ.

 

ಸೋಮವಾರದ ವೇಳೆಗೆ ನೈಋತ್ಯ ಮುಂಗಾರು ಇಡೀ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳವನ್ನು ಸಂಪೂರ್ಣವಾಗಿ ಆವರಿಸಿದೆ. ಜೊತೆಗೆ ತೆಲಂಗಾಣ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಕೆಲವು ಭಾಗಗಳಿಗೂ ತಲುಪಿದೆ. ಪ್ರಸ್ತುತ ಮುಂಗಾರಿನ ಉತ್ತರ ಗಡಿಯು (Northern Limit of Monsoon) 18°N/60°E, 18°N/65°E, 18°N/70°E, ಹರ್ನೈ, ಸೋಲಾಪುರ, ಹೈದರಾಬಾದ್, ಭದ್ರಾಚಲಂ, ಕೊರಾಪುಟ್, ಫುಲ್ಬಾನಿ, ರಾಂಚಿ, ಜಮುಯಿ ಮತ್ತು ಮುಜಾಫರ್‌ಪುರ ಮೂಲಕ ಹಾದುಹೋಗುತ್ತಿದೆ.

ಹೀಟ್‌ವೇವ್ ಮುನ್ನೆಚ್ಚರಿಕೆ

ಒಂದೆಡೆ ಮಳೆ ಕೊರತೆಯಾಗಿದ್ದರೆ, ಇನ್ನೊಂದೆಡೆ ತಾಪಮಾನ ಏರಿಕೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ವಾಯುವ್ಯ ಭಾರತದಲ್ಲಿ ಜೂನ್ 18 ರ ವೇಳೆಗೆ ಗರಿಷ್ಠ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ತದನಂತರ ಜೂನ್ 21 ರವರೆಗೆ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇರುವುದಿಲ್ಲ. ದೇಶದ ಉಳಿದ ಭಾಗಗಳಲ್ಲೂ ಜೂನ್ 21 ರವರೆಗೆ ಗರಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ ಎಂದು ವರದಿ ಹೇಳಿದೆ.

Team Udayaprabha
";