| Latest Version 9.0.7 |

State News

ಪರೀಕ್ಷಾ ಅಕ್ರಮ ತಡೆಗೆ ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡನೆ; 2024ರ ಕಾಯ್ದೆಗಿಂತ ಇದರಲ್ಲಿ ಏನೆಲ್ಲ ಬದಲಾವಣೆ ?

ನವದೆಹಲಿ: ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಇದರ ಮೇಲೆ ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಜಾರಿಯಲ್ಲಿರುವ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸುವ ಉದ್ದೇಶದಿಂದ ʼಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ)ಯನ್ನು ಸೋಮವಾರ ಲೋಕಸಭೆಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಡಿಸಿದರು.
ಇತ್ತೀಚೆಗೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ತಂದಿರುವ ಹೊಸ ತಿದ್ದುಪಡಿ ಮಸೂದೆ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವುದು, ತನಿಖೆಯನ್ನು ವೇಗಗೊಳಿಸುವುದು ಹಾಗೂ ತಪ್ಪಿತಸ್ಥರಿಗೆ ತ್ವರಿತ ಶಿಕ್ಷೆ ವಿಧಿಸುವ ಗುರಿಯನ್ನು ಹೊಂದಿದೆ.
ಹೊಸ ಮಸೂದೆಯ ಪ್ರಮುಖ ಅಂಶವೆಂದರೆ ಪ್ರತಿ ರಾಜ್ಯದಲ್ಲೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವ. ಈ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ದಿನನಿತ್ಯ ನಡೆಯಲಿದ್ದು, 90 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಈ ಮಸೂದೆಗೆ ಪ್ರತಿಪಕ್ಷಗಳು ಬೆಂಬಲ ನೀಡುವಂತೆ ಮನವಿ ಮಾಡಿದರು. “ಇದು ರಾಜಕೀಯ ಮಾಡುವ ಸಮಯವಲ್ಲ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಈ ವಿಷಯವನ್ನು ರಾಜಕೀಯಗೊಳಿಸಬಾರದು. ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಸರ್ಕಾರ ಮಹತ್ವದ ಸುಧಾರಣೆಗಳನ್ನು ತಂದಿದ್ದು, ಅವುಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು. ಇನ್ನು ನೆಪಗಳು ನಡೆಯುವುದಿಲ್ಲ. ಈ ಮಸೂದೆ ವಿದ್ಯಾರ್ಥಿಗಳ ಹಿತಕ್ಕಾಗಿ ತರಲಾಗಿದ್ದು, ಅದನ್ನು ಅಂಗೀಕರಿಸುವುದು ಸರ್ಕಾರದ ಆದ್ಯತೆಯಾಗಿದೆ,” ಎಂದು ಅವರು ಹೇಳಿದರು.

2024ರ ಕಾನೂನಿಗಿಂತ ಹೊಸ ಮಸೂದೆ ಹೇಗೆ ವಿಭಿನ್ನ?
ಹೊಸ ತಿದ್ದುಪಡಿ ಮಸೂದೆ ಶಿಕ್ಷೆಯನ್ನು ಕಠಿಣಗೊಳಿಸುವುದು, ತನಿಖೆಯನ್ನು ವೇಗಗೊಳಿಸುವುದು ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಕಾಲಮಿತಿಯನ್ನು ನಿಗದಿಪಡಿಸುವ ಹಲವು ಮಹತ್ವದ ಬದಲಾವಣೆಗಳನ್ನು ಒಳಗೊಂಡಿದೆ.
ಶಿಕ್ಷೆ ಮತ್ತಷ್ಟು ಕಠಿಣ
2024ರ ಕಾನೂನಿನ ಪ್ರಕಾರ ಪ್ರಶ್ನೆಪತ್ರಿಕೆ ಸೋರಿಕೆ ಅಪರಾಧಿಗಳಿಗೆ ೩ರಿಂದ ೫ ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಹೊಸ ತಿದ್ದುಪಡಿ ಪ್ರಕಾರ ಶಿಕ್ಷೆಯನ್ನು 10 ವರ್ಷಗಳವರೆಗೆ ಹೆಚ್ಚಿಸುವ ಪ್ರಸ್ತಾವವಿದೆ.
ದಂಡದಲ್ಲಿ ಭಾರಿ ಏರಿಕೆ
ಈವರೆಗೆ ಗರಿಷ್ಠ ₹10 ಲಕ್ಷ ದಂಡ ವಿಧಿಸುವ ಅವಕಾಶವಿತ್ತು. ಹೊಸ ಮಸೂದೆಯಲ್ಲಿ ಇದನ್ನು ₹10 ಕೋಟಿವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
ವಿಶೇಷ ತನಿಖಾ ಕಾರ್ಯಪಡೆ (STF)
ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯನ್ನು ಕೇಂದ್ರದ ನೇಮಕಿತ ತನಿಖಾ ಸಂಸ್ಥೆ ನಡೆಸುತ್ತಿತ್ತು. ಇದೀಗ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ತನಿಖೆಗಾಗಿ ಪ್ರತ್ಯೇಕ ವಿಶೇಷ ಕಾರ್ಯಪಡೆ (STF) ರಚಿಸಲು ಮಸೂದೆ ಅವಕಾಶ ಕಲ್ಪಿಸಿದೆ.
ಎರಡು ತಿಂಗಳಲ್ಲಿ ತನಿಖೆ ಪೂರ್ಣ
2024ರ ಕಾಯ್ದೆಯಲ್ಲಿ ತನಿಖೆ ಪೂರ್ಣಗೊಳಿಸಲು ಯಾವುದೇ ಕಾಲಮಿತಿ ಇರಲಿಲ್ಲ. ಹೊಸ ತಿದ್ದುಪಡಿ ಪ್ರಕಾರ ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವುದು ಕಡ್ಡಾಯವಾಗಲಿದೆ.
ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಲ್ಲಿ ದೈನಂದಿನ ವಿಚಾರಣೆ
ಈ ಹಿಂದೆ ಪ್ರಕರಣಗಳು ಸಾಮಾನ್ಯ ನ್ಯಾಯಾಲಯಗಳಲ್ಲಿ ವಿಚಾರಣೆಯಾಗುತ್ತಿದ್ದವು. ಈಗ ಪ್ರತಿಯೊಂದು ರಾಜ್ಯದಲ್ಲೂ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಿ ಪ್ರತಿದಿನ ವಿಚಾರಣೆ ನಡೆಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಮೂರು ತಿಂಗಳಲ್ಲಿ ತೀರ್ಪು
ಹಿಂದಿನ ಕಾನೂನಿನಲ್ಲಿ ತೀರ್ಪು ನೀಡಲು ಯಾವುದೇ ಕಾಲಮಿತಿ ಇರಲಿಲ್ಲ. ಹೊಸ ಮಸೂದೆ ಪ್ರಕಾರ ಮೂರು ತಿಂಗಳೊಳಗೆ ತೀರ್ಪು ನೀಡುವುದು ಕಡ್ಡಾಯವಾಗಲಿದೆ.
ಹೈಕೋರ್ಟ್‌ಗೆ 30 ದಿನಗಳಲ್ಲಿ ಮೇಲ್ಮನವಿ
ಈವರೆಗೆ ಮೇಲ್ಮನವಿ ಸಲ್ಲಿಸಲು ನಿಗದಿತ ಅವಧಿ ಇರಲಿಲ್ಲ. ಹೊಸ ಮಸೂದೆ ಪ್ರಕಾರ 30 ದಿನಗಳೊಳಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು.
ಹೈಕೋರ್ಟ್ ತೀರ್ಪಿಗೂ ಮೂರು ತಿಂಗಳ ಗಡುವು
ಮೇಲ್ಮನವಿ ಪ್ರಕರಣಗಳಲ್ಲೂ ವಿಳಂಬ ತಪ್ಪಿಸಲು ಹೈಕೋರ್ಟ್ ಮೂರು ತಿಂಗಳೊಳಗೆ ತೀರ್ಪು ನೀಡಬೇಕು ಎಂಬ ಕಾಲಮಿತಿಯನ್ನು ಸಹ ಮಸೂದೆ ಒಳಗೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನೆಪತ್ರಿಕೆ ಸೋರಿಕೆ ವಿಷಯವಾಗಿ ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ವಿಡಿಯೊ ಸಂದೇಶಗಳ ಮೂಲಕ ಸಂವಾದ ನಡೆಸುತ್ತಿದ್ದಾರೆ. ಜುಲೈ 23ರಂದು ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಇನ್ನಷ್ಟು ಕಠಿಣ ಕಾನೂನು ತರಲಾಗುತ್ತಿದೆ ಎಂದು ಅವರು ಪ್ರಕಟಿಸಿದ್ದರು.ಜುಲೈ 24ರಂದು ಪರೀಕ್ಷಾ ಸುಧಾರಣೆಗೆ ಬೆಂಬಲ ನೀಡಿದ ಜನರೇಷನ್ Z (Gen Z) ಯುವ ಸಮುದಾಯಕ್ಕೆ ಧನ್ಯವಾದ ಸಲ್ಲಿಸಿದರು. ಜುಲೈ 26ರಂದು ದೀರ್ಘಕಾಲೀನ ವ್ಯವಸ್ಥಾತ್ಮಕ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಕಾರ್ಯಪಡೆ ರಚಿಸುವುದಾಗಿ ಪ್ರಕಟಿಸಿದರು.
ನಂದನ ನೀಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ
ತಮ್ಮ ಇತ್ತೀಚಿನ ವಿಡಿಯೊ ಸಂದೇಶದಲ್ಲಿ ಪ್ರಧಾನಿ ಮೋದಿ, ನಂದನ ನೀಲೇಕಣಿ ಅವರ ಅಧ್ಯಕ್ಷತೆಯಲ್ಲಿ ಆರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿರುವುದಾಗಿ ಪ್ರಕಟಿಸಿದರು.
ಈ ಸಮಿತಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವ ಕ್ರಮಗಳು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಮಾರ್ಗಗಳು ಹಾಗೂ ತಂತ್ರಜ್ಞಾನ ಆಧಾರಿತ ಸುಧಾರಣೆಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಿದೆ.
“ಪ್ರಶ್ನೆಪತ್ರಿಕೆ ಸೋರಿಕೆಗೆ ಹೊಣೆಗಾರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲಾಗುವುದು. ತಂತ್ರಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕರ ವಿಶ್ವಾಸವನ್ನು ಬಲಪಡಿಸುವ ಬಗ್ಗೆ ಸಮಿತಿ ಶಿಫಾರಸು ಮಾಡಲಿದೆ,” ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ವಿರುದ್ಧ ಸರ್ಕಾರದ ಬಿಗಿ ಕ್ರಮ
ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕೇಂದ್ರ ಸರ್ಕಾರ ಈಗಾಗಲೇ ಆಡಳಿತಾತ್ಮಕ ಹಾಗೂ ತನಿಖಾ ಕ್ರಮಗಳನ್ನು ತೀವ್ರಗೊಳಿಸಿದೆ.
ಇಲ್ಲಿಯವರೆಗೆ ʼರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ʼಯ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಇದು ಎನ್‌ಟಿಎಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದ ಸಮಗ್ರ ಪುನರ್‌ರಚನೆಯ ಭಾಗವಾಗಿದೆ.
ಈಗಾಗಲೇ ಶಿಕ್ಷಣ ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಎನ್‌ಟಿಎಯ ಔಟ್‌ಸೋರ್ಸಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಹಾಗೂ ತಂತ್ರಜ್ಞಾನ ಆಧಾರಿತ ಭದ್ರತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಸುಧಾರಣೆಗಳನ್ನೂ ಸರ್ಕಾರ ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಇದೇ ವೇಳೆ, ಯುಪಿಎಸ್‌ಸಿ (UPSC) ಹಾಗೂ ಎನ್‌ಟಿಎ (NTA) ಸೇರಿದಂತೆ ಪ್ರಮುಖ ರಾಷ್ಟ್ರೀಯ ಪರೀಕ್ಷೆಗಳಲ್ಲಿನ ಅಕ್ರಮಗಳ ತನಿಖೆಗಾಗಿ ʼದೆಹಲಿ ಪೊಲೀಸರು ವಿಶೇಷ ಕಾರ್ಯಪಡೆ (STF)ʼಯನ್ನು ರಚಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಹಲವರನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Team Udayaprabha
";