| Latest Version 9.0.7 |

Local News

ತಾಯಿ ಅಂತ್ಯಕ್ರಿಯೆಗೆ ಬಾರದ ಮಕ್ಕಳು: ಅಂತ್ಯಕ್ರಿಯೆ ನೆರವೇರಿಸಿ ಸಮಾಜ ಸೇವಕರು ಅಮಾನವೀಯ ಘಟನೆಗೆ ಬೆಳಗಾವಿ ಸಾಕ್ಷಿ

 

 

ಬೆಳಗಾವಿ : ಇಂದಿನ ದಿನಗಳಲ್ಲಿ ಮಾನವೀಯತೆ ಅನ್ನೋದು ಮರೀಚಿಕೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಅನ್ನೋದು ಬೆಳಗಾವಿಯಲ್ಲಿ ನಡೆದ ಈ ಅಮಾನವೀಯ ಘಟನೆ ಸಾಕ್ಷಿ. ಇಬ್ಬರು ಗಂಡು ಮಕ್ಕಳಿದ್ದರೂ ವೃದ್ದಾಶ್ರಮ ಸೇರಿದ್ದ ಹೆತ್ತ ತಾಯಿ ಅಂತ್ಯಕ್ರಿಯೆ ನೆರವೇರಿಸಲು ಬಾರದ ಹಿನ್ನೆಲೆಯಲ್ಲಿ ಸಮಾಜಸೇವಕರು ತಾವೇ ಮುಂದೆ ನಿಂತು ಮೃತ ವೃದ್ಧೆಯ ಅಂತ್ಯಕ್ರಿಯೆ ಮಾಡುವ ಮೂಲಕ‌ ಮಾನವೀಯತೆ ಮೆರೆದಿದ್ದಾರೆ. ಇನ್ನು ತಾಯಿ ಅಂತಿಮ‌ ದರ್ಶನ ಪಡೆಯಲು ಬಾರದ ಮಕ್ಕಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.

ಈ ಘಟನೆ ನಡೆದಿರುವುದು ಬೆಳಗಾವಿ ನಗರದಲ್ಲಿ. ಅಂಜನಾ ಧಾಮೊನೆ ಎಂಬ ವೃದ್ಧೆ ಶಾಹುನಗರದ ತಮ್ಮ ಮನೆಯಲ್ಲಿ ನಿಧನರಾಗಿದ್ದರು. ಇಬ್ಬರು ಮಕ್ಕಳಿದ್ದರೂ ಒಬ್ಬಂಟಿ ಆಗಿಯೇ ಇವರು ಮನೆಯಲ್ಲಿ ವಾಸವಿದ್ದರು. ಕಾರಖಾನೆಯಲ್ಲಿ ಕೆಲಸ ಮಾಡುತ್ತಿರುವ ಆ ಇಬ್ಬರು ಗಂಡು‌ಮಕ್ಕಳಿಗೆ ಸ್ಥಳೀಯರು ನಿಮ್ಮ ತಾಯಿ ಮೃತಪಟ್ಟಿದ್ದಾರೆ ಎಂದು ಇಬ್ಬರು ಮಕ್ಕಳಿಗೆ ವಿಷಯ ತಲುಪಿಸಿದ್ದಾರೆ. ಆದರೂ, ಆ ಮಕ್ಕಳು ಯಾವುದೇ ರೀತಿ ದುಃಖ ವ್ಯಕ್ತಪಡಿಸಿಲ್ಲ. ಅಲ್ಲದೇ ನೀವೇ ಅಂತ್ಯಕ್ರಿಯೆ ಮಾಡುವಂತೆ ಕಾಲ್ ಕಟ್ ಮಾಡಿದ್ದಾರೆ.

 

ಏನು ಮಾಡಬೇಕು ಎಂದು ಯೋಚಿಸುತ್ತಿದ್ದ ಸ್ಥಳೀಯರು ನಗರಸೇವಕ ಶಂಕರ ಪಾಟೀಲ ಮತ್ತು ಸಮಾಜಸೇವಕ ಗಂಗಾಧರ ಪಾಟೀಲ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಈ ಇಬ್ಬರು, ಮೃತ ಅಜ್ಜಿಯ ಅಂತ್ಯಕ್ರಿಯೆಯನ್ನು ತಾವೇ ನೆರವೇರಿಸಿದ್ದಾರೆ. ಇವರಿಗೆ ನಿಖಿಲ್ ಅಪ್ಪುಗೋಳ, ಸ್ಮಶಾನ ಭೂಮಿ ಸಿಬ್ಬಂದಿ ನಿಸ್ಸಾರ ಅವರು ಸಾಥ್ ನೀಡಿದರು.

ಒಂದು ಕಡೆ ಇಂಥ ಮಕ್ಕಳು ಈ ಭೂಮಿ ಮೇಲೆ ಇದ್ದಾರಾ ಎಂಬ ಪ್ರಶ್ನೆ ಮೂಡಿದರೆ, ಮತ್ತೊಂದೆಡೆ ಹೀಗೆ ತಮಗೆ ಸಂಬಂಧವೇ ಇಲ್ಲದವರ ಅಂತ್ಯಕ್ರಿಯೆ ಮಾಡುವವ ಅಂತಃಕರಣ ಇರುವವರು ನಮ್ಮ ಜೊತೆಗಿದ್ದಾರೆ ಎಂಬ ಸಂದೇಶವನ್ನು ಈ ಘಟನೆ ನೀಡಿದೆ. ತಾನೇ ಜನ್ಮ ಕೊಟ್ಟ ಮಕ್ಕಳು ಅಂತ್ಯಕ್ರಿಯೆಗೆ ಬರಲಿಲ್ಲ. ಆದರೆ, ಈ ಮಕ್ಕಳು ಅಂತ್ಯಕ್ರಿಯೆ ಮಾಡಿದ್ದು, ನಿಜಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Team Udayaprabha
";