| Latest Version 9.0.7 |

Crime News

ಎರಡನೇ ಮದುವೆ ತಯಾರಿಯಲ್ಲಿದ್ದ ಆಯುರ್ವೇದ ವೈದ್ಯನ ಕೊಲೆ

 

ಶಿರಸಿ: ಆಯುರ್ವೇದ ವೈದ್ಯರೊಬ್ಬರ ತಲೆಗೆ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನ್ಯೂ ಕೆ.ಎಚ್.ಬಿ. ಕಾಲೋನಿಯ ಮನೆಯೊಂದರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಾಲಿ ಶಿರಸಿ ನಗರದ ಕೆ.ಎಚ್.ಬಿ ಕಾಲೋನಿ ನಿವಾಸಿಯಾಗಿರುವ ರಮೇಶ ಕಲಘುಟಕರ್ (51) ಕೊಲೆಯಾದ ಆಯುರ್ವೇದ ವೈದ್ಯ ಎಂದು ಗುರುತಿಸಲಾಗಿದೆ.

 

ಶನಿವಾರ ರಾತ್ರಿಯೇ ಅವರು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಭಾನುವಾರ ಘಟನೆ ಬೆಳಕಿಗೆ ಬಂದಿದೆ. ಒಬ್ಬರೇ ಇರುತ್ತಿದ್ದ ವೈದ್ಯರ ಮನೆಗೆ ಸಂಬಂಧಿಕರು ಬಂದಾಗ ಬಾಗಿಲು ತೆರೆಯದಿದ್ದಾಗ ಬಾಗಿಲು ಒಡೆದು ನೋಡಿದಾಗ ಕೊಲೆಯಾದ ವಿಷಯ ಬೆಳಕಿಗೆ ಬಂದಿದೆ.

 

ಪತ್ನಿ ಆರೇಳು ತಿಂಗಳುಗಳ ಹಿಂದೆ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಇವರು ಮತ್ತೊಂದು ಮದುವೆ ಮಾಡಿಕೊಳ್ಳಲು ಸಜ್ಜಾಗಿದ್ದರು. ರಮೇಶ ಅವರಿಗೆ ಇಬ್ಬರು ಮಕ್ಕಳಿದ್ದು, ಉನ್ನತ ವ್ಯಾಸಂಗ ಮಾಡಿದ್ದಾರೆ ಎಂದು ಹೇಳಲಾಗಿದೆ. ಇವರು ಶಿರಸಿಯ ನಿವಾಸದಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸೋಮವಾರ ಅವರು ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ಈ ಸಂಬಂಧ ಮನೆಗೆ ಸಂಬಂಧಿಕರು ಮನೆಗೆ ಬಂದಾಗ ಮನೆಯ ಮುಂಭಾಗದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಎಷ್ಟೇ ಕರೆದರೂ ಒಳಗಿನಿಂದ ಪ್ರತಿಕ್ರಿಯೆ ಬಾರದಿದ್ದಾಗ, ಅನುಮಾನಗೊಂಡ ಅಣ್ಣ ಹಾಗೂ ಸಂಬಂಧಿಕರು ಬೀಗ ಒಡೆದು ಒಳಗೆ ಹೋದಾಗ ಡಾ. ರಮೇಶ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

 

 

ಮನೆಯ ಮುಂಬಾಗಿಲಿಗೆ ಹೊರಗಿನಿಂದ ಬೀಗ ಹಾಕಿರುವುದು ಹಂತಕರು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂಬ ಕೋನವನ್ನು ಬಲವಾಗುವಂತೆ ಮಾಡಿದೆ. ವಿಷಯ ತಿಳಿದ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಶ್ವಾನ ದಳದೊಂದಿಗೆ ಡಿಎಸ್ಪಿ ಗೀತಾ ಪಾಟೀಲ, ಸಿಪಿಐ ಶಶಿಕಾಂತ ವರ್ಮಾ, ಶಿರಸಿ ಹೊಸ ಮಾರುಕಟ್ಟೆ ಠಾಣೆ ಪಿಎಸ್ಐ ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Team Udayaprabha
";