ಬೆಳಗಾವಿ : ಬೆಳಗಾವಿ ಸುವರ್ಣ ವಿಧಾನಸೌಧ ಬಳಿ ಗೋವುಗಳನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ತಡೆದ ಹಿಂದೂಪರ ಸಂಘಟನೆ ಕಾರ್ಯಕರ್ತರು ಚಾಲಕನನ್ನು ತಡೆದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.

ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆಗೆ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಲಾರಿಯನ್ನು ತಡೆದು ಚಾಲಕನನ್ನು ವಿಚಾರಿಸಿ ಥಳಿಸಿದ್ದಾರೆ. ಲಾರಿಯ ಗಾಜು ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದ್ದು ಗಾಜು ಪುಡಿಯಾಗಿದೆ. ಚಾಲಕ ಉಮರ್ ಮೊಯುದ್ದೀನ್ (46) ಕಾಸರಗೋಡಿನವನಾಗಿದ್ದು ಇದೀಗ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುನಿಲ್ ಕುಮಾರ್ ಎಂಬ ಮತ್ತೊಬ್ಬ ಚಾಲಕನಿಗೂ ಏಟು ಬಿದ್ದಿದೆ.

ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಡಿಸಿಪಿ ರೋಹನ್ ಜಗದೀಶ್ ಇದ್ದು ಅವರಿಗೆ ಜಗದೀಶ್ ಶೆಟ್ಟರ್ ಅವರು ಸಂಪೂರ್ಣ ಮಾಹಿತಿ ನೀಡಿ ಅಕ್ರಮವಾಗಿ ಸಾಗಿಸುತ್ತಿರುವ ಜಾನುವಾರುಗಳನ್ನು ರಕ್ಷಿಸಿ, ತಪ್ಪಿತಸ್ಥನ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.