ಬೆಳಗಾವಿ: ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಗಿರಿಯಾಲ ಕೆ.ಎ ಗ್ರಾಮದ ಯೋಧನೊಬ್ಬ ಅನಾರೋಗ್ಯ ಕಾರಣದಿಂದ ತ್ರಿಪುರಾದಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.

ಗಿರಿಯಾಲ ಕೆ.ಎ ಗ್ರಾಮದ ಉದಯ ಪುಂಡಲೀಕಪ್ಪ ಗಾಳಿ (40) ಅನಾರೋಗ್ಯ ಮೃತಪಟ್ಟ ಯೋಧ. ಇವರು 17 ವರ್ಷಗಳಿಂದ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಆರು ತಿಂಗಳ ಹಿಂದಷ್ಟೆ ಕಾಶ್ಮೀರದಿಂದ ತ್ರಿಪುರಾಕ್ಕೆ ಅವರ ವರ್ಗಾವಣೆ ಆಗಿತ್ತು. ಯೋಧ ಉದಯ ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಹಿರಿಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಮೃತ ಯೋಧನಿಗೆ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.