ಬೆಳಗಾವಿ : ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗ್ರಹದಲ್ಲಿ ಜೈಲಿನ ವಾರ್ಡರ್ ವಿನೋದ್ ಅವರ ಮೇಲೆ ಕೈದಿಯೊಬ್ಬ ಹಲ್ಲೆ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ.

ವಿನೋದ ಲೋಕಾಪುರ ಹಲ್ಲೆಗೊಳಗಾದವರು. ರಾಹಿಲ್ ಆಲಿಯಾಸ್ ರೋಹನ ಎಂಬ ಕೈದಿಯಿಂದ ವಿನೋದ್ ಅವರು ಹಲ್ಲೆಗೆ ಒಳಗಾಗಿದ್ದು, ಇದೀಗ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕೈದಿ ಹಾಸನದಿಂದ ಗಡಿಪಾರಾಗಿ ಬೆಳಗಾವಿ ಜೈಲಿಗೆ ಬಂದಿದ್ದಾನೆ. ಅತಿಭದ್ರತೆಯ ಭಾಗದಲ್ಲಿದ್ದಾನೆ. ಜೈಲಿನ ಒಳಗೆ ಇರುವ ಆಸ್ಪತ್ರೆಗೆ ತೆರಳಲು ಕೈದಿ ಸಿಬ್ಬಂದಿ ಬಳಿ ಅನುಮತಿ ಕೇಳಿದ್ದಾನೆ. ಆದರೆ ಅನುಮತಿ ತಡವಾಗಿ ಸಿಕ್ಕಿದೆ. ಇದರಿಂದ ಕೋಪಗೊಂಡ ಕೈದಿ ಸಿಟ್ಟುಗೊಂಡು ವಿನೋದ್ ಅವರಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ.

ಹಿಂಡಲಗಾ ಜೈಲಿನಲ್ಲಿ ಕೈದಿಗಳ ಪುಂಡಾಟ ಇದೇನು ಹೊಸದಲ್ಲ. ಆಗಾಗ ಕೈದಿಗಳು ಇಂತಹ ಕಿಡಿಗೇಡಿ ಕೃತ್ಯ ಮಾಡುತ್ತಾ ಇರುತ್ತಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಸಾಕಷ್ಟು ಸಲ ತಂದರು ಪ್ರಯೋಜನವಾಗಿಲ್ಲ ಎನ್ನುವುದು ಜೈಲು ಸಿಬ್ಬಂದಿಗಳ ಆರೋಪವಾಗಿದೆ.