| Latest Version 9.0.7 |

State News

ಪಾಶ್ಚಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಕಾಲೀನ ರಾಜಕೀಯ ಕುರಿತು ವಿಶೇಷ ಉಪನ್ಯಾಸ ಯಶಸ್ವಿ

ಪಾಶ್ಚಾಪುರ : ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಐ ಕ್ಯೂ ಎ ಸಿ ಇವರ ಸಂಯುಕ್ತ ಆಶ್ರಯದಲ್ಲಿ “ಜಾನ್ ಲಾಕ್ ಮತ್ತು ಸಮಕಾಲೀನ ರಾಜಕೀಯ: ಸಾಂವಿಧಾನಿಕತೆ, ಜನಸಮ್ಮತಿ, ಭಿನ್ನಾಭಿಪ್ರಾಯ ಮತ್ತು ಪ್ರಜಾಸತ್ತಾತ್ಮಕ ಆಡಳಿತ” ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಶ್ರೀಧರ ಕುಲಕರ್ಣಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಹುನ್ನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಾಪಕ ದೇವೇಂದ್ರ ವಿ. ಕಾಂಬಳೆ ಭಾಗವಹಿಸಿ ಜಾನ್ ಲಾಕ್ ಅವರ ರಾಜಕೀಯ ಚಿಂತನೆಗಳನ್ನು ವಿಶ್ಲೇಷಣಾತ್ಮಕವಾಗಿ ಹಾಗೂ ಸಮಕಾಲೀನ ರಾಜಕೀಯದೊಂದಿಗೆ ಸಮನ್ವಯಗೊಳಿಸಿ ಉಪನ್ಯಾಸ ನೀಡಿದರು.

ಜಾನ್ ಲಾಕ್ ಅವರ ನೈಸರ್ಗಿಕ ಹಕ್ಕುಗಳು, ಜೀವಿಸುವ ಹಕ್ಕು, ಸ್ವಾತಂತ್ರ್ಯ ಮತ್ತು ಆಸ್ತಿ ಹಕ್ಕು, ಸಾಮಾಜಿಕ ಒಪ್ಪಂದ ಸಿದ್ಧಾಂತ, ಜನಸಮ್ಮತಿಯ ಮಹತ್ವ, ಸೀಮಿತ ಸರ್ಕಾರ, ಕಾನೂನಿನ ಆಳ್ವಿಕೆ, ಹಾಗೂ ಭಿನ್ನಾಭಿಪ್ರಾಯದ ಪ್ರಜಾಪ್ರಭುತ್ವದಲ್ಲಿನ ಸ್ಥಾನ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಭಾರತೀಯ ಸಂವಿಧಾನದ ಮೂಲಭೂತ ಮೌಲ್ಯಗಳು, ಮೂಲಭೂತ ಹಕ್ಕುಗಳು, ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ಜಾನ್ ಲಾಕ್ ಅವರ ಚಿಂತನೆಗಳ ಪ್ರಭಾವವನ್ನು ಉದಾಹರಣೆಗಳೊಂದಿಗೆ ಮನದಟ್ಟು ಮಾಡಿದರು.

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜನಸಮ್ಮತಿ ಮತ್ತು ಭಿನ್ನಾಭಿಪ್ರಾಯ ಎರಡೂ ಪ್ರಜಾಪ್ರಭುತ್ವವನ್ನು ಬಲಪಡಿಸುವ ಅವಿಭಾಜ್ಯ ಅಂಶಗಳಾಗಿದ್ದು, ಭಿನ್ನಾಭಿಪ್ರಾಯವನ್ನು ಗೌರವಿಸುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಸಮಗ್ರ ಹಾಗೂ ಚಿಂತನಶೀಲ ಉತ್ತರಗಳನ್ನು ನೀಡಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು.

ವಿದ್ಯಾರ್ಥಿ ಕಾರ್ತಿಕ ಹರಿಜನ ಪ್ರಾರ್ಥಿಸಿದರು. ಸುಮಾ ಹಿರೇಮಠ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಾಧ್ಯಾಪಕಿ ಪೂರ್ಣಿಮಾ ಭಾಸ್ಕರ ಪೋಳ ಪರಿಚಯಿಸಿದರು. ವಿದ್ಯಾರ್ಥಿನಿ ಸಾವಿತ್ರಿ ಕೊಣ್ಣೂರ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಶೋಕ ಯಲ್ಲಪ್ಪ ಮದಭಾವಿ ವಂದಿಸಿದರು.

ಐಕ್ಯೂಎಸಿ ಸಂಯೋಜಕಿ ಡಾ. ಕಲ್ಪನಾ ಪೈನಗೋಣಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Team Udayaprabha
";