ಗಣಿತನಗರ : ಶಿಕ್ಷಣವು ಜೀವನದ ದಾರಿಗೆ ಹೊಂಬೆಳಕು. ಶಿಸ್ತು, ಪರಿಶ್ರಮ ಹಾಗೂ ದೃಢತೆ ಎಂಬ ತ್ರಿಸೂತ್ರವನ್ನು ಅಳವಡಿಸಿಕೊಂಡಲ್ಲಿ ಯಶಸ್ಸು ಅರಸಿಕೊಂಡು ಬರುತ್ತದೆ. ಶ್ರದ್ಧೆ, ಬದ್ಧತೆ ಮತ್ತು ಪ್ರಾಮಾಣಿಕವಾಗಿ ಇದ್ದಾಗ ವಿದ್ಯಾರ್ಥಿ ಪ್ರತಿಭಾನ್ವಿತನಾಗಿ ಹೊರಹೊಮ್ಮುತ್ತಾನೆ. ಅಂತಹ ಪ್ರತಿಭೆಗೆ ಸದಾವಕಾಶದ ಬಾಗಿಲು ಜ್ಞಾನಸುಧಾ ಆಗಿದೆ ಎಂದು ಬಂಟಕಲ್ನ ಶ್ರೀ ಸೋದೆ ವಾದಿರಾಜ ಮಠ ಎಜುಕೇಶನಲ್ ಇನ್ಸಿಟ್ಯೂಶನ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಡಾ.ರಾಧಾಕೃಷ್ಣ ಎಸ್. ಐತಾಳ್ ಹೇಳಿದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-2025 ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಉದ್ಯಮಿ ಅಂಡಾರು ಮಹಾವೀರ ಹೆಗ್ಡೆ ಮಾತನಾಡಿ ವಿದ್ಯೆಯೊಂದಿಗೆ ಜೀವನ ಕೌಶಲ್ಯವನ್ನು ತುಂಬಿಸುವ ಮಹಾತ್ಕಾರ್ಯ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ಮಾತನಾಡಿ ಬದುಕಿನ ಕಗ್ಗಂಟುಗಳನ್ನು ಮೆಟ್ಟಿ ನಿಂತವನಿಗೆ ಅನುಭವ ಜಾಸ್ತಿ. ಅವನೇ ಮುಂದೆ ಸರ್ವರಿಗೂ ಸ್ಪೂರ್ತಿಯಾಗುತ್ತಾನೆ. ಎಲ್ಲರ ಮನೆಮಾತಾಗುತ್ತಾನೆ ಎಂದರು.
ಸಾಧಕರಿಗೆ ಗೌರವ :
ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟಕ್ಕೆ ಆಯ್ಕೆಗೊಂಡ ಸಂಸ್ಥೆಯ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಗ್ರೀಷ್ಮಾ ಸತೀಶ್ರರನ್ನು ಮತ್ತು ಅವರ ತಂದೆಯವರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸತೀಶ್ ಕೆ. ಯವರನ್ನು ಸನ್ಮಾನಿಸಲಾಯಿತು.
2025 ನೇ ಸಾಲಿನ ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಸಾಧಕರನ್ನು, ಕಾಲೇಜು ಹಂತದಲ್ಲಿ ನಡೆಸಿದ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರನ್ನು ಗುರುತಿಸಿ ಗೌರವಿಸಲಾಯಿತು. ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಜೆ.ಇಇ ಬ್ಯಾಚ್ ತನ್ನದಾಗಿಸಿಕೊಂಡಿತು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸಾಹಿತ್ಯ, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ, ಡೀನ್ ಅಕಾಡೆಮಿಕ್ ಡಾ. ಮಿಥುನ್ ಯು, ಡೀನ್ ಸ್ಟೂಡೆಂಟ್ ಅಫೈರ್ ಶಕುಂತಳಾ ಎಂ ಸುವರ್ಣ, ವಿದ್ಯಾರ್ಥಿ ನಾಯಕರಾದ ನಿಶಾನ್ ಎನ್ ಸಾಲ್ಯಾನ್ ಹಾಗೂ ಚೈತ್ರಿಕಾ ಚೌಧರಿ ಉಪಸ್ಥಿತರಿದ್ದರು.
ಸಂಸ್ಥೆಯ ವಾರ್ಷಿಕ ವರದಿಯನ್ನು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್, ಸಾಧಕರ ಪಟ್ಟಿಯನ್ನು ಭೌತಶಾಸ್ತ್ರ ವಿಭಾಗದ ಶರತ್ ಆಚಾರ್ಯ, ಜೀವಶಾಸ್ತ್ರ ವಿಭಾಗದ ಅಭಿಷೇಕ್ ಎ. ಜಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ವಾಚಿಸಿದರು. ಉಪಪ್ರಾಂಶುಪಾಲೆ ಉಷಾ ರಾವ್ ಯು ಸ್ವಾಗತಿಸಿ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತ ಕುಲಾಲ್ ನಿರೂಪಿಸಿ ವಂದಿಸಿದರು.


,
,

















