| Latest Version 9.0.7 |

State News

ದೇಶವನ್ನೇ ಬೆಚ್ಚಿಬೀಳಿಸಿದ 2 ಆತ್ಮಹತ್ಯೆ: ಮಾಜಿ ಮಿಸ್ ಪುಣೆ ಆತ್ಮಹತ್ಯೆಗೆ ಕಾರಣವೇನು ?

ನೋಯ್ಡಾ: ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಕೇವಲ 24 ವರ್ಷದ ದೀಪಿಕಾ ಎಂಬ ಮಹಿಳೆ ತನ್ನ ಪತಿಯ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೌತಮಬುದ್ಧನಗರ ಜಿಲ್ಲೆಯಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಆಕೆಯ ಪತಿ ಮತ್ತು ಮಾವನನ್ನು ಬಂಧಿಸಲಾಗಿದೆ.

ದೀಪಿಕಾ ಪೋಷಕರು ನೀಡಿರುವ ದೂರಿನಲ್ಲಿ, ‘ಭಾನುವಾರ ಮಧ್ಯಾಹ್ನ ದೀಪಿಕಾ ನನಗೆ ಕರೆ ಮಾಡಿ, ಗಂಡನ ಮನೆಯವರು ಟೊಯೋಟಾ ಫಾರ್ಚು ನರ್ ಎಸ್‌ಯುವಿ ಮತ್ತು 50 ಲಕ್ಷ ರು. ವರದಕ್ಷಿಣೆ ಕೊಡುವಂತೆ ಹಿಂಸಿಸುತ್ತಿದ್ದಾರೆ ಎಂದು ಅತ್ತಿದ್ದಳು. ಸಂಜೆ ನಾನವರ ಮನೆಗೆ ಹೋಗಿ ಮಾತುಕತೆ ನಡೆಸಿ ಬಂದಿದ್ದೆ. ಆ ರಾತ್ರಿ 12.30 ರ ಹೊತ್ತಿಗೆ ದೀಪಿಕಾ ಕಾಲು ಜಾರಿ ಟೆರೆಸ್ಸಿಂದ ಬಿದ್ದಳೆಂದು ಆಕೆಯ ಮನೆಯವರು ಕರೆ ಮಾಡಿದ್ದರು. ನಾನು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವಳು ಮೃತಪಟ್ಟಿದ್ದಳು ಎಂದು ಆರೋಪಿಸಿದ್ದಾರೆ. ಜತೆಗೆ, ‘ನನ್ನ ಮಗಳು ಮಾನಸಿಕವಾಗಿ ಸದೃಢಳಾಗಿದ್ದಳು. ಆಕೆಯನ್ನು ಗಂಡನ ಮನೆಯವರು ಕೊಂದಿದ್ದಾರೆ ಎಂಬುದಕ್ಕೆ ದೇಹದ ಮೇಲಿರುವ ಗಾಯದ ಗುರುತುಗಳೇ ಸಾಕ್ಷಿ’ ಎಂದೂ ಸಂಜಯ್ ಹೇಳಿದರು.

ಮತ್ತೊಂದೆಡೆ ದೀಪಿಕಾರ ಚಿಕ್ಕಪ್ಪ ಮಾತನಾಡಿ, 1 ಕೋಟಿ ರು. ಖರ್ಚು ಮಾಡಿ ಮದುವೆ ಮಾಡಿದ್ದೆವು ಹಾಗೂ ಮಹಿಂದ್ರಾ ಸ್ಕಾರ್ಪಿಯೋ ಗಾಡಿ, 35-40 ತೊಲೆ ಬಂಗಾರ, ನಗದನ್ನು ನೀಡಿದ್ದೆವು’ ಎಂದಿದ್ದಾರೆ.

ಇಲ್ಲಿ ಉಸಿರುಗಟ್ಟುತ್ತಿದೆ ಅಮ್ಮಾ ಎಂದಾಕೆ ಸಾವಿಗೆ ಶರಣು:
ಗಂಡನ ಕಿರುಕುಳ ಸಹಿಸದೆ ನೇಣು

ಭೋಪಾಲ್: ‘ನನಗಿಲ್ಲಿ ಉಸಿರುಗಟ್ಟಿದಂತಾಗುತ್ತಿದೆ’
ಎಂದು ತಾಯಿಗೆ ಸಂದೇಶ ಕಳಿಸಿದ ಕೆಲ ದಿನಗಳಲ್ಲೇ ವಿವಾಹಿತೆಯೊಬ್ಬಳು ನೇಣಿಗೆ ಶರಣಾದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. 2025ರ ಡಿಸೆಂಬರ್‌ನಲ್ಲಷ್ಟೇ ಸಮರ್ಥ್ ಎಂಬುವವರನ್ನು ವಿವಾಹವಾಗಿದ್ದ ಎಂಬಿಎ ಪದವೀಧರೆ ತ್ರಿಶಾ ಸಿಂಗ್‌ (33) ಈ ಕಠಿಣ ನಿರ್ಧಾರಕ್ಕೆ, ಪತಿಯ ಮನೆಯಲ್ಲಿ ಅವರಿಗಾಗುತ್ತಿದ್ದ ಮಾನಸಿಕ ಹಿಂಸೆ ಹಾಗೂ ವರದಕ್ಷಿಣೆ ಕಿರುಕುಳ ಕಾರಣ ಎನ್ನಲಾಗಿದೆ. ಈ ನಡುವೆ ಮಾದಕ ವಸ್ತು ವ್ಯಸನಿಯಾಗಿದ್ದಳು ಎಂದು ಪತಿಯ ಮನೆಯವರು ಆರೋಪಿಸಿದ್ದರೆ, ತ್ವಿಶಾಳ ತಂದೆ, ನನ್ನ ಅಳಿಯನೇ ಮಾದಕ ವಸ್ತು ವ್ಯಸನಿಯಾಗಿದ್ದ ಎಂದು ದೂರಿದ್ದಾರೆ. ಸಮರ್ಥ್ ತಾಯಿ ನಿವೃತ್ತ ನ್ಯಾಯಾಧೀಶೆಯಾಗಿದ್ದು ಅವರ ಮನೆಯಲ್ಲೇ ಇಂಥ ಘಟನೆ ನಡೆದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತ್ವಿಶಾ ಮಾಜಿ ಮಿಸ್ ಪುಣೆ ಕಿರೀಟಕ್ಕೂ ಪಾತ್ರರಾಗಿದ್ದು, ತೆಲುಗಿನ ಚಿತ್ರವೊಂದರಲ್ಲಿ ನಟನೆ ಮಾಡಿದ್ದರು. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಸಮರ್ಥರನ್ನು ಮದುವೆಯಾಗಿದ್ದ ಅವರ ಜೀವನ ಮದುವೆಯಾದ ಕೇವಲ 5 ತಿಂಗಳಲ್ಲೇ ಸಾವಿನೊಂದಿಗೆ ಕೊನೆಗೊಂಡಿದೆ.

ಗೆಳತಿಯರೊಂದಿಗಿನ ಸಂಭಾಷಣೆಯಲ್ಲಿ ತ್ರಿಶಾ, ‘ಮದುವೆಯಿಂದ ನಿಮಗೊಂದು ಪರಿವಾರ ಸಿಗುತ್ತದೆ. ಹಾಗೆಂದು ಸ್ವಯಂ ಕಾಳಜಿ ತೋರಿಸಿಕೊಳ್ಳುವುದನ್ನು ಬಿಡಬಾರದು. ಗಡಿಬಿಡಿಯಲ್ಲಿ ಮದುವೆ ಆಗಬೇಡಿ. ಸರಿಯಾಗಿ ಯೋಚಿಸಿ ಹೆಜ್ಜೆ ಇಡಿ’ ಎಂದು ಸಲಹೆ ನೀಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

Team Udayaprabha
";