| Latest Version 9.0.7 |

National News

ಮುಂಗಾರು ಸಂಪೂರ್ಣ ಸ್ಥಗಿತ: ಶೇ.41 ರಷ್ಟು ಮಳೆ ಕೊರತೆ

 

 

ನವದೆಹಲಿ: ದೇಶದ ಬಹುತೇಕ ಪ್ರದೇಶದಲ್ಲಿ ಈ ವರ್ಷ ಮಳೆಯ ಅಭಾವ ಕಂಡು ಬಂದಿದೆ. ಜನರಲ್ಲಿ ಅದರಲ್ಲೂ ರೈತ ಸಮೂಹ ಈ ಸಲ ಆತಂಕಕ್ಕೆ ಸಿಲುಕಿದೆ. ಈ ಬಾರಿ ನೈರುತ್ಯ ಮುಂಗಾರು ದಕ್ಷಿಣ ಮಹಾರಾಷ್ಟ್ರದಲ್ಲಿ ಸ್ಥಗಿತಗೊಂಡ ಪರಿಣಾಮ ಜೂನ್‌ 4ರಿಂದ ಜೂನ್‌ 18ರವರೆಗೆ ದೇಶದಾದ್ಯಂತ ವಾಡಿಕೆಗಿಂತಲೂ ಶೇ 41ರಷ್ಟು ಕಡಿಮೆ ಮಳೆ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

 

ಈ ಅವಧಿಯಲ್ಲಿ 72.2 ಮಿ.ಮೀಯಷ್ಟು ಮಳೆ ಸುರಿಯಬೇಕಿತ್ತು. ಆದರೆ, ಕೇವಲ 42.6 ಮಿ.ಮೀಯಷ್ಟು ಮಾತ್ರ ಮಳೆ ಲಭಿಸಿದೆ. ದೇಶದ ಪೂರ್ವ, ಮಧ್ಯ ಮತ್ತು ವಾಯವ್ಯ ಭಾಗಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಮುಂಗಾರು ಹಂಗಾಮಿನ ಬೆಳೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

 

ಜೂನ್‌ ತಿಂಗಳ ಮೊದಲೆರಡು ವಾರದಲ್ಲಿ ಮಧ್ಯ ಭಾರತದ ಹಲವು ಪ್ರದೇಶಗಳಲ್ಲಿ ವಾಡಿಕೆಗಿಂತಲು ಶೇ 67ರಷ್ಟು ಕಡಿಮೆ ಹಾಗೂ ಪೂರ್ವ ಭಾರತದಲ್ಲಿ ಶೇ 42ರಷ್ಟು ಮಳೆ ಕಡಿಮೆ ಆಗಿದೆ.

ಪ್ರಸ್ತುತ ನೈರುತ್ಯ ಮುಂಗಾರು ಮಾರುತ ಅರೇಬಿಯನ್ ಸಮುದ್ರದಲ್ಲಿ ದುರ್ಬಲಗೊಂಡಿದೆ. ಇದರಿಂದಾಗಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗಿದ್ದು, ಭಾರತದ ಹಲವು ಭಾಗಗಳಲ್ಲಿ ಮುಂಗಾರಿನ ಮುನ್ನಡೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ‘ಅನುಕೂಲಕರವಲ್ಲದ ಹವಾಮಾನ ಪರಿಸ್ಥಿತಿ’ಯಿಂದಾಗಿ ನೈರುತ್ಯ ಮಾರುತಗಳು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯನ್ನು ಸುರಿಸಿಲ್ಲ’ ಎಂದು ಐಎಂಡಿ ವರದಿ ಹೇಳಿದೆ.

 

ಅರೇಬಿಯನ್ ಸಮುದ್ರದ ಮೇಲ್ಮೈಯಲ್ಲಿ ಬೀಸಬೇಕಾದ ನೈರುತ್ಯ ದಿಕ್ಕಿನ ಗಾಳಿ ಮತ್ತು ನೈರುತ್ಯ ಮುಂಗಾರಿಗೆ ತೇವಾಂಶದ ಮೂಲವಾಗಿ ಕಾರ್ಯನಿರ್ವಹಿಸುವ ಮಾರುತ ದುರ್ಬಲಗೊಂಡಿರುವುದು, ಗಾಳಿ, ಮೋಡ, ಮಳೆ ಮೇಲೆ ಪ್ರಭಾವ ಬೀರುವ ಮ್ಯಾಡೆನ್-ಜೂಲಿಯನ್ ಅನಿಶ್ಚಿತತೆ (ಎಂಜೆಒ), ಎಲ್‌ ನಿನೊ ಪ್ರಭಾವ ಸೇರಿ ಪ್ರಮುಖವಾಗಿ ಐದು ಅಂಶಗಳು ನೈರುತ್ಯ ಮುಂಗಾರಿಗೆ ಅಡ್ಡಿಯಾಗಿದೆ. ‘ಎಂಜೆಐ’ ಸಕ್ರಿಯ ಹಂತದಲ್ಲಿದ್ದಾಗ, ದಕ್ಷಿಣ ಭಾರತಕ್ಕೆ ಹೆಚ್ಚಿನ ಮೋಡಗಳನ್ನು ತರುತ್ತದೆ, ನಂತರ ಅವುಗಳನ್ನು ಮುಂಗಾರು ಮಾರುತಗಳು ಉತ್ತರದ ಕಡೆಗೆ ಒಯ್ಯುತ್ತವೆ, ಇದರಿಂದ ಹೆಚ್ಚಿನ ಮಳೆ ಆಗುತ್ತದೆ ಎಂದು ಐಎಂಡಿ ವಿಶ್ಲೇಷಿಸಿದೆ.

 

ಮಳೆ ಕೊರತೆ ಸಾಧ್ಯತೆ ಇರುವ ಜಿಲ್ಲೆಗಳನ್ನು ಗುರುತಿಸಿ ಪರ್ಯಾಯ ಬೆಳೆ ಮಾದರಿ ಜಲಸಂರಕ್ಷಣೆ ತೇವಾಂಶ ನಿರ್ವಹಣೆ ಅಂತರ್‌ಬೆಳೆಗಳಿಗೆ ವಿಶೇಷ ಗಮನ ಹರಿಸಬೇಕು.

– ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಕೃಷಿ ಸಚಿವ

Team Udayaprabha
";