ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದು ಸತತ 20 ಗಂಟೆಗಳ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಬದುಕುಳಿದು ಬಂದಿರುವ ಸಾತ್ವಿಕ್‌ಗೆ ಮರುನಾಮಕರಣ ಮಾಡಲಾಗಿದೆ.

ಸಾತ್ವಿಕ್‌ನ ಸುರಕ್ಷತೆ ಹಾಗೂ ಚೇತರಿಕೆಗಾಗಿ ಆತನ ತಾಯಿ ಸೇರಿ ಸಂಖ್ಯಾತ ಜನರು ಪ್ರಾರ್ಥನೆ ಮಾಡಿದ್ದರು. ಮಾತ್ರವಲ್ಲ ಪೂಜೆ ಪುನಸ್ಕಾರ ಮಾಡುತ್ತಾ ಹರಕೆಯನ್ನು ಹೊತ್ತಿದ್ದರು. ಏ.15ರ ಸೋಮವಾರದಂದು ವಿಜಯಪುರ ಜಿಲ್ಲೆಯ ಕೊಲ್ಹಾರದ ದಿಗಂಬರೇಶ್ವರ ಮಠದ ಪೀಠಾಧಿಪತಿ ಕಲ್ಲಿನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಮರು ನಾಮಕರಣ ಮಾಡಲಾಗಿದೆ. ಸಾತ್ವಿಕ್ ಜೀವಂತವಾಗಿ ಬದುಕಿ ಬರಲಿ ಎಂದು ಸ್ವಾಮೀಜಿಗಳು ಹರಕೆ ಕಟ್ಟಿದ್ದರು.

ಅದರಂತೆ ಸಾತ್ವಿಕ್‌ನನ್ನು ತಾಯಿ ಪೂಜಾ ತೊಟ್ಟಿಲಿಗೆ ಹಾಕಿ ಶಾಸ್ತ್ರೋಕ್ತವಾಗಿ ನಾಮಕರಣದ ಹರಕೆ ನೆರವೇರಿಸಿದ್ದಾರೆ. ಸಿದ್ದಲಿಂಗ ಮಹಾರಾಜರ ಪವಾಡದಿಂದ ನನ್ನ ಮಗ ಬದುಕಿ ಬಂದಿದ್ದಾನೆ. ಹೀಗಾಗಿ ಸಾತ್ವಿಕ್ ಮುಜಗೊಂಡ ಹೆಸರು ಬದಲಿಗೆ ಸಿದ್ದಲಿಂಗ ಎಂಬ ಹೆಸರನ್ನು ನಾಮಕರಣ ಮಾಡಿದ್ದೇವೆ ಎಂದು ತಾಯಿ ಪೂಜಾ ತಿಳಿಸಿದರು.

ಪ್ರತಿ ವರ್ಷ ಸಿದ್ದಲಿಂಗ ಮಹಾರಾಜರ ಪುರಾಣದಲ್ಲಿ ತೊಟ್ಟಲಿನಲ್ಲಿ ಗೊಂಬೆಯಿಟ್ಟು ನಾಮಕರಣ ಶಾಸ್ತ್ರ ನಡೆಯುತ್ತಿತ್ತು‌. ಈ ಬಾರಿ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿ ದುರಂತದಲ್ಲಿ ಸಾವು ಗೆದ್ದು ಬಂದಿರುವ ಸಾತ್ವಿಕ್‌ನನ್ನೇ ತೊಟ್ಟಿಲಿಗೆ ಹಾಕಿ ನಾಮಕರಣ ಶಾಸ್ತ್ರ ಮಾಡಲಾಗಿದೆ. ಸಿದ್ಧಲಿಂಗ ಮಹಾರಾಜರ ಪ್ರತಿರೂಪದಂತೆ ಸಾತ್ವಿಕ್‌ನನ್ನೇ ತೊಟ್ಟಿಲಿಗೆ ಹಾಕಿ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ ಎಂದು ಮಠದ ಪೀಠಾಧಿಪತಿ ಕಲ್ಲಿನಾಥ ಸ್ವಾಮೀಜಿ ತಿಳಿಸಿದರು.

ಸ್ವಾತಿಕ್‌ ತಾಯಿ ಪೂಜಾ ಹರಕೆ ಹೊತ್ತಿದ್ದರು. ಮಗನನ್ನು ಬದುಕಿಸಿಕೊಡುವಂತೆ ದೇವರಲ್ಲಿ ಹರಕೆ ಹೊತ್ತಿದ್ದ ಪೂಜಾ, ಮನೆಯಿಂದ ಮಠದವರೆಗೆ ದೀಡ ನಮಸ್ಕಾರ ಹಾಕಿ, ಮಗುವಿಗೆ ಮರು ನಾಮಕರಣ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಹರಕೆಯನ್ನು ಏಪ್ರಿಲ್ 28ರಂದು ಲಚ್ಯಾಣ ಗ್ರಾಮದಲ್ಲಿ ನಡೆಯುವ ಸಿದ್ದಲಿಂಗ ಮಹಾರಾಜರ ಜಾತ್ರೆಯಲ್ಲೂ ಮರುನಾಮಕರಣ ಹರಕೆಯನ್ನು ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನವೇ ಕೊಲ್ಹಾರದ ದಿಗಂಬರೇಶ್ವರ ಮಠದಲ್ಲಿ ಸಾತ್ವಿಕ್‌ಗೆ ತೊಟ್ಟಿಲಿಗೆ ಹಾಕಿ ಸಿದ್ದಲಿಂಗ ಎಂದು ನಾಮಕರಣ ಮಾಡಲಾಗಿದೆ.