ಸುಧಾ ಆರ್.ಎನ್. ಶೆಟ್ಟಿ ಯವರು ಈಗಿನ ಬೈಂದೂರು ತಾಲೂಕಿನ ಅರೆಹೊಳೆ ಬಡಾಕೆರೆ ಮುತ್ತಯ್ಯ ಶೆಟ್ಟಿಯವರ ಪುತ್ರಿ. ತಮ್ಮ ಊರಿನ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಕೊಡುಗೈ ದಾನಿಯಾಗಿದ್ದನ್ನು ಅಲ್ಲಿನ ಜನ ಸ್ಮರಿಸುತ್ತಾರೆ.

ಕುಂದಾಪುರ : ರಾಜ್ಯದ ಪ್ರಸಿದ್ಧ ಉದ್ಯಮಿ, ಮುರುಡೇಶ್ವರದ ನಿರ್ಮಾತೃ ಡಾ. ಆರ್.ಎನ್.ಶೆಟ್ಟಿಯವರ ಧರ್ಮಪತ್ನಿ ಸುಧಾ ಆರ್.ಎನ್.ಶೆಟ್ಟಿ (85) ಶುಕ್ರವಾರ ನಿಧನರಾದರು. ಅವರು ತಮ್ಮ ಪತಿಯ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸದಾ ಸಹಕರಿಸುತ್ತಿದ್ದರು. ತಮ್ಮ ಪತಿಯಂತೆಯೇ ಮಹಾದಾನಿಗಳಾಗಿದ್ದರು. ತಮ್ಮಲ್ಲಿಗೆ ಇಲ್ಲ ಎಂದು ಬರುವವರನ್ನು ಎಂದೂ ಬರಿಗೈಯಲ್ಲಿ ಕಳುಹಿಸಿದ ಉದಾಹರಣೆ ಇಲ್ಲ ಎನ್ನಬಹುದು.

ಸುಧಾ ಆರ್.ಎನ್.ಶೆಟ್ಟಿಯವರು ದೇವತಾ ಕಾರ್ಯದಲ್ಲಿಯೂ ತಮ್ಮ ಪತಿಯೊಂದಿಗೆ ಕೈಜೋಡಿಸಿದ್ದರು. ಇವರ ಪ್ರೇರಣೆಯಿಂದಲೇ ಮುರ್ಡೇಶ್ವರದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯನ್ನು ದತ್ತು ಪಡೆದುಕೊಂಡು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ಡಾ. ಆರ್.ಎನ್.ಶೆಟ್ಟಿ ಕಟ್ಟಿಸಿದ್ದರು. ಆ ಶಾಲೆಗೆ ಸುಧಾ ಆರ್.ಎನ್.ಶೆಟ್ಟಿ ಹೆಣ್ಣು ಮಕ್ಕಳ ಶಾಲೆ ಎಂದು ನಾಮಕರಣ ಮಾಡಿದ್ದನ್ನು ಸ್ಮರಿಸಬಹುದು. ಇದೇ ರೀತಿ ಹುಬ್ಬಳ್ಳಿಯ ಮೂರುಸಾವಿರ ಮಠದ‌ ಹೆಣ್ಣುಮಕ್ಕಳ ಪ್ರೌಢಶಾಲೆಗೂ ನೂತನ ಕಟ್ಟಡ ನಿರ್ಮಿಸಿ ಸುಧಾ ಆರ್.ಎನ್.ಶೆಟ್ಟಿ ಹೆಣ್ಣುಮಕ್ಕಳ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಗಿದೆ.

ಮುರ್ಡೇಶ್ವರದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವರು ಕೈಜೋಡಿಸುತ್ತಿದ್ದರು. ಮುರುಡೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಆರಂಭದಿಂದಲೂ ತಮ್ಮ ಪತಿಯವರೊಂದಿಗೆ ಇದ್ದು ಸಹಕರಿಸುತ್ತಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವತಃ ಹಾಜರಿರುತ್ತಿದ್ದರು. ಪತಿಯ ಪ್ರತಿ ಹೆಜ್ಜೆಯಲ್ಲಿಯೂ ಸಹಕರಿಸುತ್ತಿದ್ದರು. ಪತಿಯಂತೆಯೇ ಸಮಾಜದ ಏಳಿಗೆಗಾಗಿ ಅಪಾರ ಕೊಡುಗೆ ನೀಡಿದ್ದರು.
ಸುಧಾ ಆರ್.ಎನ್. ಶೆಟ್ಟಿ ಯವರು ಈಗಿನ ಬೈಂದೂರು ತಾಲೂಕಿನ ಅರೆಹೊಳೆ ಬಡಾಕೆರೆ ಮುತ್ತಯ್ಯ ಶೆಟ್ಟಿಯವರ ಪುತ್ರಿ. ತಮ್ಮ ಊರಿನ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಕೊಡುಗೈ ದಾನಿಯಾಗಿದ್ದನ್ನು ಅಲ್ಲಿನ ಜನ ಸ್ಮರಿಸುತ್ತಾರೆ.

ಸುಧಾ ಆರ್.ಎನ್.ಶೆಟ್ಟಿಯವರು ಏ.11 ರ ಸಂಜೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ವಯೋಸಹಜ ಕಾಯಿಲೆಯಿಂದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವಿದೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.