| Latest Version 9.0.7 |

Politics News

ಅಶೋಕ್ ರೈ ಮಂತ್ರಿಯಾಗಿ ಪಾಣಾಜೆ ರಸ್ತೆಯಲ್ಲಿ ಓಡಾಡಲಿದ್ದಾರೆ: ಭವಿಷ್ಯ ನುಡಿದ ದೈವಸ್ಥಾನ ಮೊಕ್ತೇಸರ..!

 

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರು ಮಂದಿನ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಗೆದ್ದು ಆ ಬಳಿಕ ಮಂತ್ರಿಯಾಗಿ ಪಾಣಾಜೆ ರಸ್ತೆಯಲ್ಲಿ ಓಡಾಡುವ ದಿನಗಳು ಬಂದೇ ಬರ್ತದೆ, ಇಲ್ಲಿನ ಪೂಮಾಣಿ ಕಿನ್ನಿಮಾಣಿ ದೈವಗಳ ಮುಂದೆ ಹೇಳುತ್ತಿದ್ದೇನೆ, ಖಂಡಿತವಾಗಿಯೂ ಆ ದಿನಗಳು ಬಂದೇ ಬರ್ತದೆ ಎಂದು ಆರ್ಲದಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣ ಬೊಳಿಲ್ಲಾಯ ಭವಿಷ್ಯ ನುಡಿದಿದ್ದಾರೆ.

ಸೋಮವಾರ ದೈವಸ್ಥಾನದ ನೂತನ ಆವರಣ ಗೋಡೆಯನ್ನು ಲೋಕಾರ್ಪಣೆಗೈದು ಮಾತನಾಡಿದರು. ಪುತ್ತೂರು ಶಾಸಕ ಅಶೋಕ್ ರಐ ಅವರು ಇಲ್ಲಿನ ತಡೆಗೋಡೆ ನಿರ್ಮಾಣಕ್ಕೆ ೭೨ ಲಕ್ಷ ರೂ ಅನುದಾನವನ್ನು ಒದಗಿಸಿದ್ದರು. ತಡೆಗೋಡೆ ನಿರ್ಮಾಣ ಇಲ್ಲಿನ ಕ್ಷೇತ್ರದ ಹಲವು ವರ್ಷಘಳ ಬೇಡಿಕೆಯೂ ಆಗಿತ್ತು. ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟನೆ ಮಾಡಿದ ಶ್ರೀಕೃಷ್ಣ ಬೊಳಿಲ್ಲಾಯವರವರು ಶಾಸಕರು ಮಾಡಿದ ಕೆಲಸವನ್ನು ಕೊಂಡಾಡಿದರು. ಈ ಹಿಂದೆಯೂ ಅವರು ಪಾಣಾಜೆಗೆ ಬೇಕಾದಷ್ಟು ನೀಡಿದ್ದಾರೆ, ಈಗಲೂ ನೀಡುತ್ತಿದ್ದಾರೆ. ಪಾಣಾಜೆಯನ್ನು ಅವರ ಸ್ವಂತ ಗ್ರಾಮಕ್ಕಿಂತಲೂ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಾರೆ ಇದೆಲ್ಲವನ್ನೂ ದೈವ ಕಾಣುತ್ತಿದೆ. ದೈವಸ್ಥಾನದ ತಡೆಗೋಡೆ ನಿರ್ಮಾಣ ಮಾಡುವಲ್ಲಿ ಮುತುವರ್ಜಿವಹಿಸಿದ ಶಾಸಕರನ್ನು ಎಂದೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಅವರು ಶಾಸಕರು ಮುಂದೆ ಮಂತ್ರಿಯಾಗಲಿದ್ದಾರೆ ಎಂದು ಸಾರಿ ಹೇಳಿದರು.

ಶಾಸಕ ಅಶೋಕ್ ರೈ ಮಾತನಾಡಿ ಇಲ್ಲಿನ ಪ್ರಸಿದ್ದ ದೈವಸ್ಥಾನಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ ಎಂದು ಶಾಸಕನಾದ ಪ್ರಾರಂಭದಲ್ಲಿ ಇಲ್ಲಿನ ಮೊಕ್ತೇಸರರು ಮನವಿ ಮಾಡಿದ್ದರು.  ಆಪ್ರಕಾರ ಸರಕಾರದಿಂದ ಅನುದಾನವನ್ನು ಒದಗಿಸಿ ಇಲ್ಲಿನ ಭಕ್ತರ ಬೇಡಿಕೆಯನ್ನು ಈಡೇರಿಸಿದ್ದೇನೆ. ಭಕ್ತರು ಈ ಕೆಲಸವನ್ನು ಪ್ರೀತಿಯಿಂದ ಸ್ವೀಕಾರ ಮಾಡಿದ್ದಾರೆ ಎಂಬ ವಿಶ್ವಾಶವೂ ಇದೆ. ಮುಂದೆ ಮಂತ್ರಿಯಾಗಲಿ ಎಂದು ಮೊಕ್ತೇಸರರು ಆಶೀರ್ವಾದ ಮಾಡಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಕಾರಿ ಜಾಗದಲ್ಲಿರುವ ವಿವಿಧ ಧರ್ಮಗಳ ಮಂದಿರಗಳನ್ನು ಸಕ್ರಮ ಮಾಡುವ ಯೋಜನೆಗೆ ಮುಂದಾಗಿದ್ದೇನೆ ಎಲ್ಲಾ ಧರ್ಮದ ದೈವ ದೇವರುಗಳ ಆಶೀರ್ವಾದವನ್ನು ಬೇಡುತ್ತಿದ್ದೇನೆ ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಯುವ ಕಾಂಗ್ರೆಸ್ ಮುಖಂಡ ಶ್ರೀಪ್ರಸಾದ್ ಪಾಣಾಜೆ, ಕಾಂಗ್ರೆಸ್ ಮುಖಂಡರಾದ ಬಾಬು ರೈ ಕೋಟೆ, ನಿವೃತ್ತ ಸೈನಿಕ ಪುಷ್ಪರಾಜ ರೈ ಕೋಟೆ, ಪಾಣಾಜೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಿತಿ ಸದಸ್ಯ ವಿಶ್ವನಾಥ ರೈ ಕಡಮಾಜೆ, ಸದಾಶಿವ ರೈ ಸೂರಂಬೈಲು, ರಾಮನಾಯ್ಕ ಕೋಟೆ, ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ, ರಮನಾಥ ರೈ, ವಿಶ್ವನಾಥ ರೈ, ಬಾಲಕೃಷ್ಣ ರೈ, ಪದ್ಮನಾಭ ರೈ ಕೈಕ್ರೋಡು, ವೆಂಕಪ್ಪ ನಾಯ್ಕ ಹಾಗೂ ದಿನೇಶ್ ಮಣಿಯಾಣಿ ಆರ್ಲಪದವು ಉಪಸ್ಥಿತರಿದ್ದರು.

Team Udayaprabha
";