| Latest Version 9.0.7 |

State News

ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನ ಉಳಿಸಲು ಶಾಸಕರಿಗೆ ಮನವಿ

ಹೆಬ್ರಿ: ಹೆಬ್ರಿ ಮೂಲಕ ಹಾದು ಹೋಗುವ 169-ಎ ಉಡುಪಿ-ಹೆಬ್ರಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಗಾಗಿ ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ಜಾಗ ಹೋಗಲಿದ್ದು ದೇವಾಲಯದ ವಾಸ್ತುವಿಗೆ ತೊಂದರೆಯಾಗದಂತೆ ದೇವಸ್ಥಾನವನ್ನು ಉಳಿಸಿಕೊಡಬೇಕು ಎಂದು ಶಾಸಕ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಇಲ್ಲಿಗೆ ಭೇಟಿ ನೀಡಿದ್ದ ಶಾಸಕರಿಗೆ ಆಡಳಿತ ಮೋಕೇಸರ ಹೆಬ್ರಿ ತಾರಾನಾಥ ಬಲ್ಲಾಳ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು. ನಂತರ ಶಾಸಕರು ದೇವಸ್ಥಾನದ ಪರಿಸರವನ್ನು ವೀಕ್ಷಿಸಿ ವಾಣಿಜ್ಯ ಸಂಕೀರ್ಣದ ಹಿಂಬದಿಯ ಗೋಡೆಯ ವರೆಗೆ ಜಾಗ ಉಳಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಈಗಾಗಲೇ ಮಾತಾಡಿದ್ದು ದೇವಸ್ಥಾನಕ್ಕೆ ಹಾನಿಯಾಗದಂತೆ ರಸ್ತೆ ನಿರ್ಮಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮತ್ತೊಮ್ಮೆ ಮಾತನಾಡಿ ಮನವರಿಕೆ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಮುಖಂಡ ಹೆಬ್ರಿ ಭಾಸ್ಕರ ಜೋಯಿಸ್, ಉದ್ಯಮಿ ಬಾಲಕೃಷ್ಣ ನಾಯಕ್, ಹೆಬ್ರಿ ರಾಮಕೃಷ್ಣ ಆಚಾರ್ಯ, ಅರ್ಚಕ ರಾಮಕೃಷ್ಣ ಆಚಾರ್ಯ ಹಾಜರಿದ್ದರು.

Team Udayaprabha
";