ಬೆಳಗಾವಿ : ಸುಮಾರು 3,000ಕ್ಕೂ ಅಧಿಕ ಜನರಿಂದ 160 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಳಕವಾಡಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಜುಲೈ 13ರಂದು ಕೌಜಲಗಿ ಗ್ರಾಮದ ಅಶೋಕ ವಿರುಪಾಕ್ಷಿ ಅಸಗುಪ್ಪಿ ಅವರು ನೀಡಿದ ದೂರಿನ ಆಧಾರದ ಮೇಲೆ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳಗಾವಿಯ ಮಂಗಳವಾರ ಪೇಠದಲ್ಲಿರುವ ರೇಣುಕಾ ನಿವಾಸ ಅಪಾರ್ಟ್ಮೆಂಟ್ನ ಮೊದಲ ಮಹಡಿಯಲ್ಲಿ APPEXX BIZCORP LLP ಎಂಬ ಟ್ರೇಡಿಂಗ್ ಕಂಪನಿ ನಡೆಸುತ್ತಿದ್ದ ಆರೋಪಿಗಳು, ಸಾರ್ವಜನಿಕರಿಂದ ಸುಮಾರು 160 ಕೋಟಿ ಹಣವನ್ನು ಹೂಡಿಕೆ ರೂಪದಲ್ಲಿ ಸಂಗ್ರಹಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು, ವಿವಿಧ ಸ್ಥಿರಾಸ್ತಿಗಳನ್ನು ಖರೀದಿಸುವುದು ಸೇರಿದಂತೆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 85/2026ರಲ್ಲಿ BUDS ಕಾಯ್ದೆಯ ಕಲಂ 21(1)(2), ಕರ್ನಾಟಕ ರಕ್ಷಣಾ ಹಿತಾಸಕ್ತಿ ಠೇವಣಿದಾರರ ಕಾಯ್ದೆ (KPID) ಕಲಂ 9 ಹಾಗೂ BNS-2023ರ ಕಲಂ 318(4) ಸಹಿತ ಕಲಂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ತನಿಖೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಕಾ&ಸು), ಉಪ ಪೊಲೀಸ್ ಆಯುಕ್ತರು (ಅವಿ) ಹಾಗೂ ಖಡೇಬಜಾರ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ.
ಟಿಳಕವಾಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಪ್ರಕರಣದ ಆರೋಪಿ ನಂ. 6 ಅರ್ಜುನ ಮಹಾದೇವ ವಾಘಮಾರೆ(36), ಮಾಂಗನೂರ, ಚಿಕ್ಕೋಡಿ ತಾಲೂಕು ಅವರನ್ನು ಬಂಧಿಸಿದೆ. ಬಳಿಕ ಅವರನ್ನು ಬೆಂಗಳೂರಿನ XCII ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (CCH-93)ಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಟಿಳಕವಾಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ, ಪಿಎಸ್ಐ (ಕಾ&ಸು) ವಿಶ್ವನಾಥ ಘಂಟಾಮಠ, ಸಿಬ್ಬಂದಿಗಳಾದ ಮಹೇಶ ಪಾಟೀಲ, ಎ.ವಿ. ನೀಲಪ್ಪನವರ, ನಾಗೇಂದ್ರ ತಳವಾರ, ಲಾಡಜೀಸಾಬ್ ಮುಲ್ತಾನಿ, ಪ್ರೇಮ ಪವಾರ್, ಶ್ರೀಕಾಂತ ಕುರಬರ ಹಾಗೂ ಟೆಕ್ನಿಕಲ್ ಸೆಲ್ನ ರಮೇಶ ಅಕ್ಕಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ಪೊಲೀಸ್ ತಂಡದ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಶ್ಲಾಘಿಸಿದ್ದಾರೆ.


,


















