ಬೆಳಗಾವಿ: ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರಕ್ಕೆ ನಾಲ್ವರು ಯುವಕರು ಅಂಗಡಿ ಮಾಲೀಕನನ್ನು ಥಳಿಸಿದ್ದು, ಅಂಗಡಿ ಮಾಲೀಕ ಸಾವನ್ನಪ್ಪಿದ್ದಾನೆ.
ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಕೊಲೆಯಾದ ವ್ಯಕ್ತಿ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ(22) ನಿಖಿಲ್ ಮಹೇಶ್ ಚೌಗಲೆ (22) ವಿವೇಕ್ ರಾಜೇಂದ್ರ ಚೌಗುಲೆ (22) ಮತ್ತು ಶ್ರೀಧರ್ ರತನ ಪಾಟೀಲ (21) ಹಲ್ಲೆ ಮಾಡಿದ ಆರೋಪಿಗಳು.
ಮಂಗಳವಾರ ರಾತ್ರಿ ಮೋಹನಗಾ ಜಾತ್ರೆ ಮುಗಿಸಿ ಬರುತ್ತಿದ್ದ ಈ ನಾಲ್ವರು ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಸಿಗರೇಟ್ ಸೇದುವುದಕ್ಕಾಗಿ ಬೋಡಕೆನಟ್ಟಿ ಗ್ರಾಮದಲ್ಲಿ ಬೈಕ್ ನಿಲ್ಲಿಸಿದ್ದಾರೆ.ಅಂಗಡಿ ಮುಚ್ಚುತ್ತಿದ್ದ ಮಾಲೀಕನನ್ನು ತಡೆದು ಸಿಗರೇಟ್ ತೆಗೆದುಕೊಂಡು ಅಲ್ಲೇ ಸೇದಿದ್ದಾರೆ. ನಂತರ ದುಡ್ಡು ಕೇಳಿದ ಅಂಗಡಿ ಮಾಲೀಕನೊಂದಿಗೆ ವಾಗ್ವಾದಕ್ಕಿಳಿದ ಸಮಯದಲ್ಲಿ ಮಾತಿನ ಚಕಮಕಿಯಲ್ಲಿ ಪರಸ್ಪರ ಬಡದಾಡಿಕೊಂಡಿದ್ದಾರೆ. ಆದರೆ ಈ ನಾಲ್ವರು ಮಾಡಿದ ಹಲ್ಲೆಗೆ ಮಾಲಿಕ ಯಲ್ಲಪ್ಪ ತೀವ್ರವಾಗಿ ಅಸ್ವಸ್ಥಗೊಂಡಿದ್ದ, ತಕ್ಷಣ ಆತನನ್ನು ಸ್ಥಳೀಯರು ವೈದ್ಯರಿಗೆ ತೋರಿಸಿ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಹಲ್ಲೆ ನಡೆದು ಅರ್ಧ ಗಂಟೆ ಒಳಗೆ ಅಂಗಡಿ ಮಾಲೀಕ ಸಾವನ್ನಪುತ್ತಿದ್ದಂತೆ ವಿಷಯ ತಿಳಿದ ತಕ್ಷಣ ಕಾಕತಿ ಪೊಲೀಸರು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


,
,


















