ನವದೆಹಲಿ : ಹದಿಹರೆಯದ ಪ್ರತಿಭಾವಂತ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಶ್ರೀಲಂಕಾ ವಿರುದ್ಧ ಜೂನ್ 9 ರಿಂದ ನಡೆಯಲಿರುವ ತ್ರಿಕೋಣ ಏಕದಿನ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಬ್ಯಾಟರ್ ತಿಲಕ್ ವರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.
ಅತಿಥೇಯ ಶ್ರೀಲಂಕಾದ ಜೊತೆ ಅಫ್ಘಾನಿಸ್ತಾನ ತಂಡವು ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಮತ್ತೊಂದು ತಂಡವಾಗಿದೆ. ಪಂದ್ಯಗಳು ಡಂಬುಲಾದಲ್ಲಿ ನಡೆಯಲಿವೆ. ಭಾರತ ಎ ತಂಡವು ಶ್ರೀಲಂಕಾ ಎ ವಿರುದ್ಧ (ಜೂನ್ 9 ಮತ್ತು 15) ಮತ್ತು ಅಫ್ಘಾನಿಸ್ತಾನ ಎ (ಜೂನ್ 11 ಮತ್ತು 17) ವಿರುದ್ಧ ತಲಾ ಎರಡು ಬಾರಿ ಆಡಲಿದೆ. ಲೀಗ್ ನಂತರ ಅಗ್ರ ಎರಡು ತಂಡಗಳು ಜೂನ್ 21ರಂದು ನಡೆಯಲಿರುವ ಫೈನಲ್ನಲ್ಲಿ ಆಡಲಿವೆ.
ಭಾರತ ಎ ತಂಡವು ಏಕದಿನ ಸರಣಿಯ ಜೊತೆ ಶ್ರೀಲಂಕಾ ಎ ಜೊತೆ ಗಾಲೆಯಲ್ಲಿ ನಾಲ್ಕು ದಿನಗಳ ಎರಡು ‘ಟೆಸ್ಟ್’ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳಿಗೆ ತಂಡವನ್ನು ಮುಂದೆ ಪ್ರಕಟಿಸಲಾಗುವುದು.
ಸೀನಿಯರ್ ತಂಡಕ್ಕೆ ಆಯ್ಕೆ ಮಾಡುವ ಹಾದಿಯಲ್ಲಿ ಭಾರತ ಎ ತಂಡದಲ್ಲಿ ಸೂರ್ಯವಂಶಿ ಅವರ ಸಾಮರ್ಥ್ಯ ಪರೀಕ್ಷೆಗೆ ಅವಕಾಶ ನೀಡಲು ಆಯ್ಕೆಗಾರರು ಬಯಸಿದ್ದಾರೆ ಎಂದು ತಿಳಿದುಬಂದಿದೆ.


,


















